ಪ್ರಜಾಸ್ತ್ರ ಸುದ್ದಿ
ಢಾಕಾ(Dhaka): ನೆರೆಯ ಬಾಂಗ್ಲಾದೇಶದಲ್ಲಿ(Bangladesh) ನಡೆಯುತ್ತಿರುವ ವಿದ್ಯಾರ್ಥಿಗಳ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ(sheikh hasina) ರಾಜೀನಾಮೆ ಸಲ್ಲಿಸಿ ದೇಶ ತೊರೆದಿದ್ದಾರೆ. ಅವರಿದ್ದ ವಿಮಾನ ಭಾರತೀಯ ವಾಯುನೆಲೆಯಲ್ಲಿ ಕಾಣಿಸಿಕೊಂಡಿದೆ. ಹಿಂಡನ್ ವಾಯುನೆಲೆಗೆ ಬಂದಿಳಿದ ಅವರನ್ನು ಭಾರತೀಯ ವಾಯುಪಡೆಯ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು.
ತಮ್ಮ ಸಹೋದರಿ ಶೇಖ್ ರೆಹನಾ ಜೊತೆಗೆ ಸೇನಾ ಹೆಲಿಕಾಪ್ಟರ್ ಮೂಲಕ ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ದೇಶ ತೊರೆದಿದ್ದಾರೆ. ಹೀಗಾಗಿ ಸೇನಾ ಮುಖ್ಯಸ್ಥರು ಅವರ ರಾಜೀನಾಮೆಯನ್ನು ದೃಢಪಡಿಸಿದ್ದಾರೆ. ಮಧ್ಯಂತರ ಸರ್ಕಾರ ರಚಿಸುವುದಾಗಿ ತಿಳಿಸಿದ್ದಾರೆ. ದೆಹಲಿಗೆ ಬಂದು ಇಳಿಯುವ ಸಾಧ್ಯೆತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಭಾರತ ಬಾಂಗ್ಲಾ ಗಡಿ ಭಾಗದಲ್ಲಿ ಬಿಎಸ್ಎಫ್ ಯೋಧರ ಭದ್ರತೆ ಹೆಚ್ಚಿಸಲಾಗಿದೆ. 4,096 ಕಿಲೋ ಮೀಟರ್ ಭಾರತ-ಬಾಂಗ್ಲಾ ಗಡಿ ಹೊಂದಿದೆ.
ದಂಗೆಗೆ ನಾಗರಿಕ ಸೇವೆ ನೇಮಕಾತಿಯ ಮೀಸಲಾತಿ ಕಾರಣ:
ಜನವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 300 ಸ್ಥಾನಗಳಲ್ಲಿ 299 ಸ್ಥಾನಗಳಿಗೆ ಮತದಾನ ನಡೆಯಿತು. ಇದರಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷ ಭರ್ಜರಿ 223 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಹಸೀನಾ 4ನೇ ಬಾರಿಗೆ ಪ್ರಧಾನಿಯಾದರು. ಈ ವೇಳೆ ವಿದ್ಯಾರ್ಥಿಗಳು ನಾಗರಿಕ ಸೇವೆಯಲ್ಲಿನ ಮೀಸಲಾತಿ ಪರಿಷ್ಕರಿಸುವಂತೆ ಹೋರಾಟ ಪ್ರಾರಂಭಿಸಿದರು. ಈಗಿರುವ ಮೀಸಲಾತಿ ಪದ್ಧತಿ ಶೇಖ್ ಹಸೀನಾ ಬೆಂಬಲಿಗೆ ಅನುಕೂಲವಾಗುವ ರೀತಿಯಲ್ಲಿದೆ ಎಂದು ಆರೋಪಿಸಲಾಯಿತು.
ಶಾಲಾ, ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಸುಪ್ರೀಂ ಕೋರ್ಟ್ ತೀರ್ಪುಗೂ ಒಪ್ಪದೆ ಹೋರಾಟ ಮುಂದುವರೆಸಿದರು. ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಮೀಸಲಾತಿ ಸೇರಿ ಎಲ್ಲ ಕೋಟಾಗಳನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದರು. ಇದನ್ನು ವಿಫಲಗೊಳಿಸುವಲ್ಲಿ ಅಥವ ನಿಯಂತ್ರಣಕ್ಕೆ ತರುವಲ್ಲಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಹಿಂಸಾರೂಪ ಪಡೆದುಕೊಂಡಿತು. ದಂಗೆ ಏಳಲು ಶುರು ಮಾಡಿದರು. ಸೇನಾ ಪಡೆಯಿಂದಲೂ ನಿಯಂತ್ರಿಸಲು ಆಗಲಿಲ್ಲ. ಹೀಗಾಗಿ 100 ಕ್ಕೂ ಜನರು ಪ್ರಾಣ ಕಳೆದುಕೊಂಡರು.