ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿರುವ ನ್ಯಾಯಾಲಯದ ಸುವರ್ಣ ಮಹೋತ್ಸವವನ್ನು ಡಿಸೆಂಬರ್ ನಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಈ ನಿಟ್ಟಿನಲ್ಲಿ ಈಗಿನಿಂದಲೇ ಸಕಲ ಸಿದ್ಧತೆಗಳು ನಡೆದಿವೆ ಎಂದು ವಕೀಲರ ಸಂಘದ ಅಧ್ಯಕ್ಷರಾದ ಎಸ್.ಬಿ ಪಾಟೀಲ ಅವರು ಹೇಳಿದ್ದಾರೆ. ಶನಿವಾರ ನ್ಯಾಯಾಲಯದ ಆವರಣದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಹೈಕೋರ್ಟ್ ಮುಖ್ಯನ್ಯಾಯಾಧೀಶರು, ಆಡಳಿತಾತ್ಮಕ ನ್ಯಾಯಾಧೀಶರು, ಕಾನೂನು ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಅಲ್ಲದೇ ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ ಒಳಗೊಂಡು ಎಸ್ಎಸ್ಎಲ್ ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತೆ. ಇದರ ಜೊತೆಗೆ ರಾಜ್ಯ ಮಟ್ಟದ ವಕೀಲರ ಕ್ರಿಕೆಟ್ ಟೂರ್ನಿ ನಡೆಸಲಾಗುವುದು. ಸಾಧಕರನ್ನು ಗೌರವಿಸಲಾಗುವುದು ಸೇರಿದಂತೆ ಹಲವು ಕಾರ್ಯಕ್ರಮಗಳ ರೂಪರೇಷಗಳನ್ನು ಸಿದ್ಧಪಡಿಸಲಾಗಿದೆ.
ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪಟ್ಟಣಕ್ಕೆ ಜಿಲ್ಲಾ ನ್ಯಾಯಾಲಯ ಪೀಠದ ಬಗ್ಗೆ ಬೇಡಿಕೆ ಸಲ್ಲಿಸಲಾಗುವುದು. ಸಾಕಷ್ಟು ವಿಚಾರಗಳು ಇರುವುದರಿಂದ 21 ಹಿರಿಯ ವಕೀಲರ ಮಾರ್ಗದರ್ಶನದಲ್ಲಿ 9 ಸಮಿತಿಗಳನ್ನು ರಚಿಸಲಾಗಿದೆ. ಎಲ್ಲರೊಂದಿಗೆ ಕೂಡಿಕೊಂಡು ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ಸಂಘದ ಉಪಾಧ್ಯಕ್ಷ ಎ.ಜಿ ಮಸರಕಲ್, ಸಹಕಾರ್ಯದರ್ಶಿ ಪಿ.ಎಂ ಬಡಿಗೇರ, ಸಲಹಾ ಸಮಿತಿ ಸದಸ್ಯ ಎಸ್.ಎಸ್ ಬೊಮ್ಮನಜೋಗಿ ಉಪಸ್ಥಿತರಿದ್ದರು.