ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸಿಂದಗಿ ಪಟ್ಟಣದ ಪರಿಸ್ಥಿತಿ ಹೇಗಿದೆ ಅಂದರೆ ಮೇಲೆ ಥಳಕು ಒಳಗೆ ಹುಳುಕು. ಯಾಕಂದರೆ, ಪಟ್ಟಣದ ಯಾವುದೇ ಏರಿಯಾಗೆ ಹೋದರೂ ಒಂದೇ ಒಂದು ರಸ್ತೆ ಸರಿಯಿಲ್ಲ. ಎಲ್ಲಿ ನೋಡಿದರೂ ತಗ್ಗು ಗುಂಡಿಗಳು. ಮಳೆಗಾಲ ಈಗ ಶುರುವಾಗುತ್ತಿದೆ. ಆಗಲೇ ಜನರು ಹೈರಾಣಾಗುತ್ತಿದ್ದಾರೆ. ಇನ್ನು ಮಳೆಗಾಲ ಪೂರ್ತಿ ಕಳೆಯುವಷ್ಟರಲ್ಲಿ ಏನೆಲ್ಲ ಅನಾಹುತವಾಗುತ್ತೋ ಅನ್ನೋ ಭಯ ಶುರುವಾಗಿದೆ. ಪಟ್ಟಣವನ್ನು ಅಭಿವೃದ್ಧಿ ಮಾಡಬೇಕಾದ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಇವರೆಲ್ಲರಿಗಿಂತ ಅತಿ ಹೆಚ್ಚು ಕಾಳಜಿ ಇರಬೇಕಾದ ಪುರಸಭೆ ಸದಸ್ಯರು ಇದ್ದು ಇಲ್ಲದಂತಾಗಿದ್ದಾರೆ.
ಪುರಸಭೆಯನ್ನು ನಗರಸಭೆ ಮಾಡಲು ಶಾಸಕರು ಹೊರಟಿದ್ದಾರೆ. ಆದರೆ, ಪುರಸಭೆಗೆ ಇರಬೇಕಾದ ಕನಿಷ್ಠ ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ. ಪುರಸಭೆ ಕಚೇರಿಗೆ ಹೋದರೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರಿಗೆ ಸಿಗುವುದಿಲ್ಲ. ವಾರ್ಡ್ ಗಳ ಸಮಸ್ಯೆ ಬಗೆಹರಿಸಲು ಸದಸ್ಯರಿಗೆ ಪುರಸೊತ್ತಿಲ್ಲ. ಪಟ್ಟಣದ ರಸ್ತೆಗಳನ್ನು ಅದೆಷ್ಟು ಸಾರಿ ಅಗೆದಿದ್ದಾರೋ ಅನ್ನೋದು ಸಂಬಂಧಿಸಿದ ಅಧಿಕಾರಿಗಳು, ಆಯಾ ವಾರ್ಡ್ ಸದಸ್ಯರು ಹಾಗೂ ಗುತ್ತಿಗೆದಾರರಿಗೆ ಮಾತ್ರ ಗೊತ್ತು. ಗ್ರಾಮ ಪಂಚಾಯ್ತಿಗಿಂತಲೂ ಅತ್ಯಂತ ಕಳಪೆ ಮಟ್ಟದಲ್ಲಿ ಸಿಂದಗಿ ಪುರಸಭೆ ಆಡಳಿತ ನಡೆಸುತ್ತಿದೆ.
ಒತ್ತುವರಿ ಜಾಗಗಳನ್ನು ಅರ್ಧಂಬರ್ಧ ತೆರವುಗೊಳಿಸಿದರು. ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸವಿಲ್ಲ. ಕೆಲಸ ಮಾಡಬೇಕಾದ ಸದಸ್ಯರು ಕುರ್ಚಿ ಬೀಳಿಸಲು, ಮತ್ತೊಬ್ಬರನ್ನು ಏರಿಸಲು ಮತ ಹಾಕಿದ ಜನರಿಗೆ ಕಾಣಿಸದಂತೆ ಊರು ಬಿಟ್ಟು ತಿರುಗಾಡಿದರು. ಸಾಮಾಜಿಕ ಜಾಲತಾಣದಲ್ಲಿ ಮಿಂಚುವ ಪುರಸಭೆ ಸದಸ್ಯರು, ಮಳೆಗಾಲ ಪೂರ್ತಿ ಶುರುವಾಗುವುದರೊಳಗೆ ಸಮಸ್ಯೆಗಳತ್ತ ಗಮನ ಹರಿಸಿ ಜನರಿಗಾಗುವ ತೊಂದರೆಯಿಂದ ತಪ್ಪಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.