ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಅಪ್ತಾಪ್ತೆಯನ್ನು ಅಪಹರಣ ಮಾಡಿ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಕಳ್ಳ ಸ್ವಾಮೀಜಿಯ ಮಠವನ್ನು ರಾಯಬಾಗ ತಹಶೀಲ್ದಾರ್ ನೇತೃತ್ವದಲ್ಲಿ ಗುರುವಾರ ನೆಲಸಮ ಮಾಡಲಾಗಿದೆ. ಮೇಖಲಿ ಗ್ರಾಮದಲ್ಲಿನ ಸರ್ವೇ ನಂಬರ್ 225ರಲ್ಲಿರುವ ಸರ್ಕಾರಿ ಗೈರಾಣ ಜಮೀನಿನಲ್ಲಿ 8 ಎಕರೆಯನ್ನು ಅತಿಕ್ರಮಣ ಮಾಡಿಕೊಂಡು ಮಠ ಸ್ಥಾಪಿಸಲಾಗಿತ್ತು. ಸ್ವಯಂ ಘೋಷಿತ ಕಳ್ಳ ಸ್ವಾಮೀಜಿ ಬಂಧನ ಬಳಿಕ ಈಗ ಮಠ ನೆಲಸಮ ಮಾಡಲಾಗಿದೆ.
ಮೂಲತಃ ಕಲಬುರ್ಗಿ ಜಿಲ್ಲೆಯವನಾದ ಈತ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಎಂದು ಸ್ವಯಂ ಘೋಷಿಸಿಕೊಂಡು ಹಲವು ವರ್ಷಗಳಿಂದ ಬೆಳಗಾವಿಯಲ್ಲಿ ನೆಲೆಸಿದ್ದ. ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಅಪ್ರಾಪ್ತೆಯನ್ನು ಮಾತನಾಡಿಸಿ, ನಿಮ್ಮ ಮನೆಯವರು ನನಗೆ ಪರಿಚಯವಿದ್ದಾರೆ. ಮನೆಗೆ ಬಿಡುವುದಾಗಿ ಕಾರಿನಲ್ಲಿ ಹತ್ತಿಸಿಕೊಂಡಿದ್ದಾನೆ. ಆದರೆ, ಬಾಲಕಿಯನ್ನು ಮನೆಗೆ ಬಿಡದೆ ಬಾಗಲಕೋಟೆ, ರಾಯಚೂರಿನ ಲಾಡ್ಜ್ ಗಳಿಗೆ ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಇದಾದ ಬಳಿಕ ಸ್ವಾಮೀಜಿಯನ್ನು ಬಂಧಿಸಲಾಗಿದೆ. ಇದೀಗ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಇತನಿಗೆ ಸಂಬಂಧಿಸಿದ ಕಾರು ವಶಕ್ಕೆ ಪಡೆಯಲಾಗಿದೆ. ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಆರೋಪಿ ಕಟ್ಟಿದ ಮಠವನ್ನು ತಾಲೂಕು ಆಡಳಿತದ ನೇತ್ವದಲ್ಲಿ ಗುರುವಾರ ಕೆಡವಲಾಗಿದೆ.¬