ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಲಿಂಗಾಯತ ಮಠಾಧೀಶರನ್ನು, ಸಮುದಾಯದ ವಿರುದ್ಧ ಮಾನಹಾನಿಕರ ಹಾಗೂ ಸಮಾಜದಲ್ಲಿ ದ್ವೇಷ ಹರಡುವಂತೆ ಮಾಡಿದ್ದಾರೆ ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಮತ್ತು ಬಸವಾದಿ ಅಭಿಮಾನಿಗಳು ಮನವಿ ಸಲ್ಲಿಸಿದರು.
ಈ ವೇಳೆ ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಬಸನಗೌಡ ಹರನಾಳ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರಾದ ಅರವಿಂದ ಕುಲಕರ್ಣಿ ಜಂಟಿಯಾಗಿ ಮಾತನಾಡಿ, ಅಕ್ಟೋಬರ್ 9ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬೀಳೂರ ಗ್ರಾಮದ ಬಸವ ಪರಂಪರೆಯ ವಿರಕ್ತ ಮಠದ ಸಾರ್ವಜನಿಕ ಸಭೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಹತ್ತಿರದ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿ ಕರ್ನಾಟಕದ ಲಿಂಗಾಯತ ಮಠಾಧೀಶರ ಒಕ್ಕೂಟದ ಪೂಜ್ಯರ ಕುರಿತು ತೀರ ಅವಮಾನಕಾರಿ, ಮಾನಹಾನಿಕರ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸಬಹುದಾದ ಶಬ್ದಗಳನ್ನು ಬಳಸಿದ್ದಾರೆ. ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ಮುಖ್ಯಮಂತ್ರಿಗಳ ಕೃಪಾಪೋಷಿತ ಕಲಾವಿದರೆಂದು ಹೇಳಿಕೆ ನೀಡಿದ್ದಾರೆ. ಮುಂದುವರೆದು, ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಹಾಗೂ ಲಿಂಗಾಯತ ಮಠಾಧಿಪತಿಗಳಿಗೆ ಅಶ್ಲೀಲ, ಅವಾಚ್ಯ ಅಸಂವಿಧಾನಿಕ ಭಾಷೆಯನ್ನು ಬಳಸಿ ಅವರಿಗೆ ಅಪಮಾನ ಮಾಡಿದ್ದಾರೆ. ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಅವರು ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಕಲಂ 196 ಸಮುದಾಯಗಳ ಮಧ್ಯೆ ಶತ್ರುತ್ರ ಹುಟ್ಟಿಸುವುದು, ಕಲಂ 299 ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡುವ ಉದ್ದೇಶದಿಂದ ಮಾಡಿದ ಕಲಂ 356 ಸುಮಾರು ನಾಲ್ಕು ನೂರು ಮಠಾಧೀಶರ ಮಾನಹಾನಿ ಕಲಂ 352 ಉದ್ದೇಶಪೂರ್ವಕವಾಗಿ ಶಾಂತಿ ಭಂಗ ಮಾಡುವ ಉದ್ದೇಶದಿಂದ ಮಾಡಿದ ಅವಮಾನದ ಹೇಳಿಕೆಯಾಗಿದೆ. ಸೂಕ್ತ ತನಿಖೆ ನಡೆಸಿ, ಕನ್ಹೇರಿ ಮಠದ ಸ್ವಾಮೀಜಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ. ಅದಲ್ಲದೆ ಸ್ವಾಮೀಜಿ ಅಕ್ಟೋಬರ್ 15, 16 ರಂದು ಬಸವನ ಬಾಗೇವಾಡಿಗೆ ಭೇಟಿ ನೀಡುತ್ತಿದ್ದು, ಕಾರಣ ಅವರನ್ನು ವಿಜಯಪುರ ಜಿಲ್ಲಾ ಪ್ರವೇಶವನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಹಾಗೂ ಬಸವಾಭಿಮಾನಿಗಳಾದ ಜೆ.ಎಸ್.ಪಾಟೀಲ, ಪ್ರಭುಗೌಡ ಪಾಟೀಲ, ಶಿವಾನಂದ ಕಲ್ಬುರ್ಗಿ, ಹೂಗಾರ, ಅಂಗಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.