ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು(Chikkamagaloru): ರಾಜ್ಯದಲ್ಲಿ ಒಂದಲ್ಲ ಒಂದು ವಿವಾದಗಳು ಹುಟ್ಟಿ ಕೊಳ್ಳುತ್ತಿವೆ. ಇದಕ್ಕೆ ಕಾಂಗ್ರೆಸ್ ಓಲೈಕೆಯ ರಾಜಕಾರಣವೆಂದು ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಫ್ಯಾಲೆಸ್ಟೀನ್(Palestine Flag) ಧ್ವಜ ಹಿಡಿದು ಬೈಕ್ ನಲ್ಲಿ ಓಡಾಡಿದ್ದ 6 ಯುವಕರನ್ನು ಬಂಧಿಸಲಾಗಿದೆ. ಅವರೆಲ್ಲ ಅಪ್ರಾಪ್ತರೆಂದು ಹೇಳಲಾಗುತ್ತಿದೆ. ಆದರೆ, ಅವರು ನೋಡಿದರೆ ಕೇಂದ್ರ ಸರ್ಕಾರವೇ ಪ್ಯಾಲೆಸ್ಟೀನ್ ಗೆ ಬೆಂಬಲ ನೀಡಿದೆ ಎಂದು ಹೇಳುವಷ್ಟರ ಮಟ್ಟಿಗೆ ಮಾತನಾಡಿದ್ದರಂತೆ. ಇದರ ನಡುವೆ ಚಿತ್ರದುರ್ಗದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿಯೂ ಸಹ ಫ್ರೀ ಪ್ಯಾಲೆಸ್ಟೀನ್ ಘೋಷಣೆ ಕೂಗಲಾಯಿತು. ಈಗ ಯುವಕನೊಬ್ಬ ಫ್ರೀ ಪ್ಯಾಲೆಸ್ಟೀನ್ ಬರಹ ಇರುವ ಟೀ ಶರ್ಟ್(T Shart) ಹಾಕಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.
ಇವರೆಲ್ಲ ಪ್ಯಾಲೆಸ್ಟೀನ್ ಧ್ವಜ ತರಸಿದ್ದು ಎಲ್ಲಿಂದ? ಫ್ರೀ ಪ್ಯಾಲೆಸ್ಟೀನ್ ಟೀ ಶರ್ಟ್ ತರಿಸಿದ್ದು ಹೇಗೆ? ಇದೆಲ್ಲ ಮಾಡುತ್ತಿರೋದು ಯಾರು ಎನ್ನುವುದರ ತನಿಖೆಯಾಗಬೇಕು ಎನ್ನುವ ಕೂಗು ಎದ್ದಿದೆ. ಈ ನೆಲದಲ್ಲಿರುವ ಪ್ರತಿಯೊಬ್ಬರು ದೇಶವನ್ನು ಪ್ರೀತಿಸಬೇಕು. ಗೌರವಿಸಬೇಕು. ಇಲ್ಲಿನ ಕಾನೂನಿಗೆ ಬೆಲೆ ಕೊಡಬೇಕು. ಅಂತಾರಾಷ್ಟ್ರೀಯ ಆಂತರಿಕ ವಿಚಾರಗಳಿಗೆ ಇಷ್ಟೊಂದು ಬೆಂಬಲ ನೀಡುವ ಇಂತವರ ಮನಸ್ಥಿತಿ ಎಂತದ್ದು ಅನ್ನೋದು ತಿಳಿಯುತ್ತೆ ಎಂದು ವಾಗ್ದಾಳಿ ನಡೆಸಲಾಗುತ್ತಿದೆ. ಇವರಿಗೆ ಬೆಂಬಲ ನೀಡುವಂತೆ ಸಚಿವ ಜಮೀರ್(B.Z Zameer Ahmed Khan) ಅಹಮ್ಮದ್ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಕೇಂದ್ರ ಸರ್ಕಾರ ಪ್ಯಾಲೆಸ್ಟೀನ್ ಪರವಾಗಿದೆ. ಹೀಗಾಗಿ ಹುಡುಗುರು ಧ್ವಜ ಹಿಡಿದರೆ ಏನು ತಪ್ಪು ಎಂದು ಸಚಿವ ಜಮೀರ್ ಅಹಮ್ಮದ್ ಕೇಳಿದ್ದಾರೆ. ಹೀಗಾಗಿ ಇಂತಹ ಕಿಡಿಗೇಡಿತನದ ಕೃತ್ಯ ಮಾಡುವವರಿಗೆ ಸಚಿವರ, ಸರ್ಕಾರದ ಬೆಂಬಲವಿದೆ. ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವ ಧೈರ್ಯ ಬಂದಿದೆ. ತನ್ನ ದೇಶದ ಬಗ್ಗೆ ಮೊದಲು ವಿಚಾರ ಮಾಡಬೇಕು. ನಾನು ಹುಟ್ಟಿದ ದೇಶಕ್ಕೆ ಯಾವ ರೀತಿ ಕೊಡುಗೆ ನೀಡಬೇಕು. ವಿಶ್ವ ಮಟ್ಟದಲ್ಲಿ ನನ್ನ ರಾಜ್ಯ, ನನ್ನ ದೇಶವನ್ನು ಮುನ್ನಡೆಯಲು ಏನು ಮಾಡಬೇಕು ಎನ್ನುವ ಚಿಂತನೆ ಇರಬೇಕೆ ಹೊರತು, ಮತ್ತೊಂದು ದೇಶದಲ್ಲಿನ ಕಲಹದ ಬಗ್ಗೆ ಪರ-ವಿರೋಧ ಮಾಡುತ್ತಾ ಇರುವುದಲ್ಲ. ರಾಜತಾಂತ್ರಿಕ ವಿಚಾರಗಳೇ ಬೇರೆ ಎನ್ನುವ ತಿಳುವಳಿಕೆ ಇರಬೇಕು ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತವರನ್ನು ಕೂಡಲೇ ಮಟ್ಟ ಹಾಕಬೇಕು ಎನ್ನುತ್ತಿದ್ದಾರೆ.