ಪ್ರಜಾಸ್ತ್ರ ಸುದ್ದಿ
ಶಿಮ್ಲಾ(Shimla): ಹಿಮಾಚಲ ಪ್ರದೇಶದಲ್ಲಿ ಶೂನ್ಯ ಡಿಗ್ರಿ ತಾಪಮಾನದಲ್ಲಿಯೂ ಶ್ವಾನವೊಂದು ಮಾಲೀಕನ ಮೃತದೇಹವನ್ನು ನಾಲ್ಕು ದಿನಗಳ ಕಾದ ಹೃದಯ ಕಲಕುವ ದೃಶ್ಯ ಕಂಡು ಬಂದಿದೆ. ಚಂಬಾ ಜಿಲ್ಲೆಯ ಭರ್ಮೌರ್ ಪ್ರದೇಶದಲ್ಲಿ ನಾಲ್ಕು ದಿನಗಳ ಹಿಂದೆ ಇಂತಹದೊಂದು ಘಟನೆ ನಡೆದಿದೆ. ವಿಕ್ಷಿತ್ ರಾಣಾ(22) ಹಾಗೂ ಆಯುಷ್(13) ಮೃತ ದುರ್ದೈವಿಗಳು. ಪಿಟ್ ಬುಲ್ ತಳಿಯ ಶ್ವಾನ ಇವರ ಮೃತದೇಹವನ್ನ ಕಾದಿದೆ.
ಸಾಮಾಜಿಕ ಜಾಲತಾಣದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿದ್ದ ವಿಕ್ಷಿತ್ ರಾಣಾ ಜನವರಿ 22ರಂದು ಬಾಲಕ ಆಯುಷ್ ಹಾಗೂ ತನ್ನ ನಾಯಿಯನ್ನು ಕರೆದುಕೊಂಡು ಭರ್ಮಣಿ ದೇವಾಲಯದ ಹತ್ತಿರದ ಬೆಟ್ಟಗಳಿಗೆ ಹೋಗಿದ್ದಾನೆ. ಹವಾಮಾನ ಇಲಾಖೆ ಹಿಮಪಾತದ ಮುನ್ಸೂಚನೆಗಾಗಿ ಯಲ್ಲೋ ಅಲರ್ಟ್ ಘೋಷಿಸಿತ್ತು. ಇದನ್ನು ನಿರ್ಲಕ್ಷಿಸಿ ಅಲ್ಲಿಗೆ ಹೋಗಿದ್ದಾರೆ.
ವಿಪರೀತ ಚಳಿ, ಅಪಾರ ಪ್ರಮಾಣದಲ್ಲಿ ಹಿಮ ಬಿದ್ದಿದ್ದರಿಂದ ಹಿಮದಡಿ ಸಿಲುಕಿ ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು ಮನೆಯವರಿಗೆ ಫೋನ್ ಮಾಡಿ ನಾವು ತೊಂದರೆಯಲ್ಲಿ ಸಿಲುಕಿದ್ದೇವೆ ಎಂದು ಹೇಳಿದ್ದಾರೆ. ಹೀಗಾಗಿ ಕುಟುಂಬಸ್ಥರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಭದ್ರತಾ ಸಿಬ್ಬಂದಿ ಇವರ ಹುಡುಕಾಟ ನಡೆಸಿದ್ದರು. ಆದರೂ ಸಿಕ್ಕಿರಲಿಲ್ಲ. ಮೂರು ದಿನಗಳ ಬಳಿಕ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿದಾಗ ನಾಯಿಯೊಂದು ಕಾಣಿಸಿದೆ. ಅಲ್ಲಿಗೆ ಹೋದಾಗ ಮೃತದೇಹಗಳು ಕಂಡು ಬಂದಿವೆ.
ಭದ್ರತಾ ಸಿಬ್ಬಂದಿ ಬಂದಾಗ ಶ್ವಾನ ಬೊಗಳು ಶುರುಮಾಡಿದೆ. ನಿತ್ರಾಣದ ಪರಿಸ್ಥಿತಿಯಲ್ಲೂ ಮಾಲೀಕರನ್ನು ಮುಟ್ಟಲು ಬಿಡದೆ ಬೊಗಳಿದೆ. ಅದನ್ನು ಸಮಾಧಾನ ಮಾಡಿ ಮೃತದೇಹಗಳನ್ನು ತೆಗೆದುಕೊಂಡು ಹೋಗಲಾಗಿದೆ. ನಂತರ ಕುಟುಂಬಸ್ಥರಿಗೆ ಮೃತದೇಹ ಹಾಗೂ ಶ್ವಾನವನ್ನು ಹಸ್ತಾಂತರಿಸಲಾಗಿದೆ. ನಾಯಿಯ ನಿಯತ್ತು, ಪ್ರೀತಿ ಬಗ್ಗೆ ಹೇಳಲಾಗುತ್ತೆ. ಇಂತಹ ಘಟನೆಗಳು ಅದನ್ನು ನಿಜ ಮಾಡುತ್ತವೆ. ಹಿಮ ಪ್ರಾಣಿಗಳಿಂದ ನಾಲ್ಕು ದಿನಗಳ ಕಾಲ ಮಾಲೀಕನ ಮೃತದೇಹ ಕಾದ ಶ್ವಾನದ ನಿಷ್ಠೆ ಎಲ್ಲರ ಮೆಚ್ಚುಗೆ ಗಳಿಸಿದೆ.




