ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandaya): ಟ್ರಾಫಿಕ್ ಪೊಲೀಸರು ಅಡ್ಡ ಕೈ ಹಾಕಿದ ಪರಿಣಾಮ ಬೈಕ್ ನಿಲ್ಲಿಸಲು ಆಗದೆ 3 ವರ್ಷದ ಮಗುವೊಂದು ಮೃತಪಟ್ಟ ಘಟನೆ ಸೋಮವಾರ ಸ್ವರ್ಣಸಂದ್ರ ಹತ್ತಿರ ನಡೆದಿತ್ತು. ಇಂದು ಕುಟುಂಬಸ್ಥರನ್ನು ಭೇಟಿಯಾದ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಪರಿಹಾರದ ಹಣ ನೀಡಲು ಮುಂದಾದರು. ಹಣ ನಿರಾಕರಿಸಿದ ಬಾಲಕಿ ಹೃತಿಕ್ಷಾ ತಂದೆ ಅಶೋಕ್, ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡರು.
ನಿಮ್ಮ ಪರಿಹಾರದ ಹಣದಿಂದ ನನಗೆ ಏನೂ ಆಗಬೇಕಿಲ್ಲ. ನನ್ನ ಮಗುವನ್ನು ವಾಪಸ್ ಕೊಡಲು ಸಾಧ್ಯವೇ ಎಂದು ಕಣ್ಣೀರು ಹಾಕುತ್ತಾ ಪ್ರಶ್ನಿಸಿದರು. ಈ ಘಟನೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಅನೇಕರು ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದಕ್ಕೆ ಕಾರಣರಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಲಾಗಿದೆ.
ಮಗುವಿಗೆ ನಾಯಿ ಕಚ್ಚಿದೆ ಎಂದು ಹೆತ್ತವರು ಮದ್ದೂರಿನಿಂದ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೊರಟ್ಟಿದ್ದರು. ಸ್ವರ್ಣಸಂದ್ರ ಹತ್ತಿರ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದರು. ಆಗ ಬೈಕ್ ಗೆ ಕೈ ಅಡ್ಡ ಹಾಕಿ ನಿಲ್ಲಿಸಲು ನೋಡಿದ್ದಾರೆ. ವೇಗದಲ್ಲಿದ್ದ ಬೈಕ್ ಬಿದ್ದಿದೆ. ಆಗ ತಲೆಗೆ ಪೆಟ್ಟಾಗಿ ಮಗು ಮೃತಪಟ್ಟಿದೆ. ಆಗ ಸ್ಥಳದಲ್ಲಿ ತಂದೆ, ತಾಯಿ, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಟ್ರಾಫಿಕ್ ಪೊಲೀಸರ ವಿರುದ್ಧ ಕಿಡಿ ಕಾರಿದರು. ರಸ್ತೆ ತಿರುವಿನಲ್ಲಿ, ಮರೆಯಲ್ಲಿ ನಿಂತು ಏಕಾಏಕಿ ಅಡ್ಡ ಬಂದು ಬೈಕ್ ಸವಾರರ ಜೀವಕ್ಕೆ ಅಪಾಯ ಮಾಡುತ್ತಿರುವ ಇಂತಹ ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.