ಪ್ರಜಾಸ್ತ್ರ ಸುದ್ದಿ
ಶಿಲ್ಲಾಂಗ್(Shillong): ಹನಿಮೂನ್ ಗೆ ಹೋದ ಜೋಡಿ ನಾಪತ್ತೆ ಪ್ರಕರಣ ಭಾರಿ ಸದ್ದು ಮಾಡಿತು. ನಂತರ ಪತಿಯ ಶವ ಪತ್ತೆ ಆಯಿತು. ಪತ್ನಿ ಸುಳಿವು ಸಿಗಲಿಲ್ಲ. ಮೇಘಾಲಯದ ಶಿಲ್ಲಾಂಗ್ ನಲ್ಲಿ ಈ ಘಟನೆ ನಡೆದಿತ್ತು. ಇದೀಗ ಸ್ಫೋಟಕ ಮಾಹಿತಿ ಹೊರ ಬಂದಿದ್ದು, ಪತಿ ರಾಜ ರಘುವಂಶಿ ಹತ್ಯೆಗೆ ಪತ್ನಿಯಿಂದಲೇ ಸುಪಾರಿ ನಡೆದಿತ್ತು. ಆರೋಪಿ ಪತ್ನಿ ಸೋನಮ್ ಪೊಲೀಸರ ಮುಂದೆ ಶರಣಾಗಿದ್ದಾಳೆ ಎಂದು ಮೇಘಾಲಯ ಡಿಜಿಪಿಐ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗಾಜಿಪುರದ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಸೋನಮ್ ಶರಣಾಗಿದ್ದಾಳಂತೆ. ಈಕೆಯ ಜೊತೆಗೆ ಮೂವರನ್ನು ಬಂಧಿಸಲಾಗಿದೆ. ಇನ್ನುಳಿದವರ ಪತ್ತೆಗಾಗಿ ಶೋಧಕಾರ್ಯ ನಡೆದಿದೆಯಂತೆ. ರಘುವಂಶಿಯನ್ನು ಹತ್ಯೆ ಮಾಡುವಂತೆ ಪತ್ನಿ ಸೋನಮ್ ಸುಪಾರಿ ಕೊಟ್ಟಿದ್ದಳು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 11ರಂದು ರಾಜ ರಘುವಂಶಿ ಹಾಗೂ ಸೋನಮ್ ಮದುವೆಯಾಗಿದ್ದರು. ಬಳಿಕ ಮೇಘಾಲಯಕ್ಕೆ ಹನಿಮೂನ್ ಗೆ ತೆರಳಿದ್ದರು. ಮೇ 23ರಂದು ಜೋಡಿ ನಾಪತ್ತೆಯಾಗುತ್ತೆ. ಜೂನ್ 2ರಂದು ರಘುವಂಶಿ ಶವ ಜಲಪಾತದ ಹತ್ತಿರ ಪತ್ತೆಯಾಗುತ್ತೆ. ಸೋನಮ್ ಪತ್ತೆಯಾಗುವುದಿಲ್ಲ. ತನಿಖೆ ನಡೆಸಿದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಎಸ್ಐಟಿ ತಂಡ ಇಬ್ಬರನ್ನು ಇಂದೋರ್ ನಲ್ಲಿ, ಒಬ್ಬನನ್ನು ಉತ್ತರ ಪ್ರದೇಶದಲ್ಲಿ ಬಂಧಿಸುತ್ತಾರೆ. ಪ್ರಕರಣದ ಸೂತ್ರಧಾರಿ ಪತ್ನಿ ಸೋನಮ್ ಪೊಲೀಸರ ಮುಂದೆ ಶರಣಾಗುತ್ತಾಳೆ. ಉಳಿದವರ ಪತ್ತೆ ಕಾರ್ಯ ನಡೆದಿದೆ.
ಕನ್ನಡದಲ್ಲಿ ಬಾ ನಲ್ಲೆ ಮಧುಚಂದ್ರಕೆ ಎನ್ನುವ ಸಿನಿಮಾವಿದೆ. 1993ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದ ಅದ್ಭುತ ಚಿತ್ರ. ನಟ ಕೆ.ಶಿವರಾಮ್, ನಟಿ ನಂದಿನಿ ಸಿಂಗ್ ಲೀಡ್ ರೋಲ್ ಮಾಡಿದ್ದು. ಪತ್ನಿಯ ಅಕ್ರಮ ಸಂಬಂಧ ಗೊತ್ತಾದ ಪತಿ ಹನಿಮೂನ್ ಗೆ ಕರೆದುಕೊಂಡು ಹೋಗಿ ಪತ್ನಿಯನ್ನು ಹತ್ಯೆ ಮಾಡುವುದಾಗಿದೆ. ಇಲ್ಲಿ ಪತ್ನಿ ಯಾವ ಕಾರಣಕ್ಕೆ ಪತಿಯನ್ನು ಹತ್ಯೆ ಮಾಡಿದಳು ಅನ್ನೋದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.