ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಶಾಸಕ ಅಶೋಕ ಮನಗೂಳಿ ದೆಹಲಿಗೆ ತೆರಳಿದ್ದು, ನಾಯಕತ್ವ ಬದಲಾವಣೆ ವಿಚಾರವಾಗಿ ದೆಹಲಿಗೆ ತೆರಳಿದ್ದಾರೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ವಿಷಯ ಕಪೋಕಲ್ಪಿತವಾಗಿದ್ದು, ಸತ್ಯಕ್ಕೆ ದೂರವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ. ನಾನು ದೆಹಲಿಗೆ ತೆರಳಿರುವ ವಿಷಯ ಏನಂದರೆ, ಒಂದು ವೇಳೆ ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಯಾದರೆ ವಿಜಯಪುರ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು, ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಪರವಾಗಿ ಅತೀ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಟ್ಟ ಜಿಲ್ಲೆಯಾಗಿದೆ. ಆದ್ದರಿಂದ ಈಗಾಗ್ಲೇ ಇರುವ ಇಬ್ಬರೂ ಸಚಿವರನ್ನು ಸಂಪುಟದಲ್ಲಿ ಮುಂದುವರೆಸುವ ಜೊತೆಗೆ ಹೆಚ್ಚುವರಿಯಾಗಿ ಇನ್ನೊಂದು ಸಚಿವ ಸ್ಥಾನವನ್ನು ನಮ್ಮ ಜಿಲ್ಲೆಗೆ ನೀಡಬೇಕು ಮತ್ತು ಸಚಿವರಾದ ಶಿವಾನಂದ ಪಾಟೀಲರವರನ್ನು ಸಂಪುಟದಿಂದ ಕೈ ಬಿಡಬಾರದು ಎಂಬ ವಿಷಯವಾಗಿ ದೆಹಲಿಗೆ ತೆರಳಲಾಗಿದೆ ಎಂದಿದ್ದಾರೆ.
ನಾನು ನಾಯಕತ್ವ ಬದಲಾವಣೆ ವಿಷಯವಾಗಿ ನಮ್ಮ ಪಕ್ಷದ ಹೈ ಕಮಾಂಡ್ ಜೊತೆ ಚರ್ಚೆ ಮಾಡುವಷ್ಟು ದೊಡ್ಡ ನಾಯಕನಲ್ಲ. ಪಕ್ಷದ ಹಿತದೃಷ್ಟಿಯಿಂದ ಆ ವಿಷಯವಾಗಿ ಗೊಂದಲ ಬಗೆಹರಿಸಿಕೊಳ್ಳಲು ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ಸಮರ್ಥರಿದ್ದಾರೆ. ನಾನು ಈ ಇಬ್ಬರೂ ನಾಯಕತ್ವದಲ್ಲಿ ವಿಶ್ವಾಸ ಹೊಂದಿರುತ್ತೇನೆ ಅಂತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




