ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಐಪಿಎಲ್ ಟ್ರೂಫಿ ಗೆದ್ದ ಹಿನ್ನಲೆಯಲ್ಲಿ ಬುಧವಾರ ಆರ್ ಸಿಬಿ ತಂಡದಿಂದ ವಿಜಯೋತ್ಸವ ಮೆರವಣಿಗೆ ನಡೆಸಲಾಗಿದೆ. ಇದನ್ನು ನೋಡಲು, ಸಂಭ್ರಮದಲ್ಲಿ ಭಾಗವಹಿಸಲು ಲಕ್ಷಾಂತರ ಅಭಿಮಾನಿಗಳು ಸೇರಿದ್ದರು. ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನೋಡಲು ಅಭಿಮಾನಿಗಳು ನುಗ್ಗಿದ ಪರಿಣಾಮ 10 ಅಮಾಯಕ ಜೀವಗಳು ಬಲಿಯಾಗಿವೆ. ಕಾಲ್ತುಳಿತದಿಂದಾಗಿ ಇಂತಹದೊಂದು ದುರಂತ ನಡೆದಿದೆ.
ಗಾಯಾಳುಗಳನ್ನು ಬೌರಿಂಗ್, ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದೇಹಿ ಆಸ್ಪತ್ರೆಗೆ 16 ಜನರನ್ನು ಕರೆದುಕೊಂಡು ಬರಲಾಗಿತ್ತು. ಅದರಲ್ಲಿ 4 ಜನರು ಮೃತಪಟ್ಟಿದ್ದಾರೆ. ಎಲ್ಲರೂ 18ರಿಂದ 22 ವಯಸ್ಸಿನವರು. ಮೂವರು ಯುವಕರು, ಓರ್ವ ಯುವತಿ ಇದ್ದಾಳೆ. 12 ಮಂದಿಗೆ ಗಾಯಗಳಾಗಿವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ಘಟನೆಯನ್ನು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಖಂಡಿಸಿದ್ದಾರೆ. ಸಂಭ್ರಮದ ಘಳಿಗೆಯನ್ನು ಸೂತಕದ ಘಳಿಕೆ ಮಾಡಿದ ಕಾಂಗ್ರೆಸ್ ಸರ್ಕಾರದ ವಿವೇಚನಾರಹಿತ ದುರಾಡಳಿತ ಇವತ್ತು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸಹ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.