ಪ್ರಜಾಸ್ತ್ರ ಸುದ್ದಿ
ಧಾರವಾಡ(Dharwad): ಕರ್ನಾಟಕ ವಿಶ್ವವಿದ್ಯಾಲಯದ(Karnataka University) ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಜಯಶ್ರೀ ತಳವಾರ ಬರೋಬ್ಬರಿ 9 ಚಿನ್ನದ(Gold Medal) ಪದಕಗಳನ್ನು ಪಡೆಯುವ ಅಮೋಘ ಸಾಧನೆ ಮಾಡಿದ್ದಾಳೆ. ಮಂಗಳವಾರ ಗಾಂಧೀ ಭವನದಲ್ಲಿ ನಡೆದ 74ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರು ಪದಕಗಳನ್ನು ಪ್ರಧಾನ ಮಾಡಿದರು. ಈ ವೇಳೆ ಹಲವು ಗಣ್ಯರು, ಕುಟುಂಬಸ್ಥರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಸಾಕ್ಷಿಯಾದರು.
ಚಿನ್ನದ ಹುಡುಗಿ ಜಯಶ್ರೀ ಹಿನ್ನಲೆ: ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದವಳು. ತಂದೆ ಗ್ರಾಮ ಪಂಚಾಯ್ತಿಯಲ್ಲಿ ಸಿಪಾಯಿ. ತಾಯಿ ಆಶಾ ಕಾರ್ಯಕರ್ತೆ. ಹಿಂದುಳಿದ ವರ್ಗದ ಜೊತೆಗೆ ಬಡತನದಲ್ಲಿಯೇ ಹುಟ್ಟಿ ಬೆಳೆದ ವಿದ್ಯಾರ್ಥಿನಿ ಓದಿನಲ್ಲಿ ಸದಾ ಮುಂದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಗದಗ ಜಿಲ್ಲೆ ರೋಣ ತಾಲೂಕಿನ ಕುಂಟೋಜಿಯಲ್ಲಿ ಮುಗಿಸಿದ್ದಾಳೆ. ಮುಂದೆ ಪಿಯುಸಿ, ಪದವಿ ಧಾರವಾಡದ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದ್ದಾಳೆ. 2022ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ((Mass Communication and Journalism) ವಿಭಾಗಕ್ಕೆ ಪ್ರವೇಶ ಪಡೆದಿದ್ದಾಳೆ.
ಹೆತ್ತವರು ಕಷ್ಟದ ನಡುವೆ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಮಗಳು ಸಹ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲದಂತೆ ಬರೋಬ್ಬರಿ 9 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾಳೆ. ತಾಯಿಯ ದುಡಿಮೆ, ಪ್ರಾಮಾಣಿಕತೆಯೇ ತನಗೆ ಸ್ಪೂರ್ತಿ ಎಂದು ವಿದ್ಯಾರ್ಥಿ ಜಯಶ್ರೀ ತಳವಾರ ಹೇಳಿದ್ದಾಳೆ. ಜೊತೆಗೆ ತನ್ನ ಸಾಧನೆಗೆ ಕಾರಣರಾದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸಿದ್ದಾಳೆ.