ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಸಾರ್ವಜನಿಕರು ಈ ಕುರಿತು ಯಾವುದೇ ಭಯಪಡುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗಿರುವುದಿಲ್ಲ. ಆದ್ಯಾಗ್ಯೂ ಮುಂಜಾಗ್ರತೆ ಕ್ರಮ ವಹಿಸಿಕೊಂಡು ಜಾಗೃತರಾಗಿರುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ 10 ಬೆಡ್ಗಳ ವಿಶೇಷ ವಾರ್ಡ್ ಜೊತೆಗೆ 10 ವೆಂಟಿಲೇಟರ್ ಮತ್ತು 426 ಬೆಡ್ಗಳಿಗೆ ಸೆಂಟರ್ ಆಕ್ಸಿಜನ ಸಂಪರ್ಕ, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್ಎಂಓ), 185 ಜಂಬೋ ಸಿಲಿಂಡರ್, ಅಗತ್ಯ ಔಷಧಗಳು, ಮಾಸ್ಕ್ ಕಿಟ್ ಕೂಡಾ ದಾಸ್ತಾನು ಮಾಡಲಾಗಿದೆ. ಖಚಿತ ಪ್ರಕರಣಗಳಲ್ಲಿ ಅಲ್ಪ ಪ್ರಮಾಣದ ಲಕ್ಷಣಗಳುಳ್ಳ ರೋಗಿಗಳಿಗೆ ಹೋಮ ಐಸೋಲೇಶನ್ ಮಾಡಲಾಗುವುದು ಹಾಗೂ ತೀವ್ರತರದ ರೋಗ ಲಕ್ಷಣಗಳುಳ್ಳ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆ, ತಾಲೂಕಾ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಶೀತ, ನೆಗಡಿ, ಜ್ವರ ಇರುವ ತಮ್ಮ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸದಿರುವುದು ಉತ್ತಮ. ಸಾರ್ವಜನಿಕರು ಆಗಾಗೆ ಸಾಬೂನಿನಿಂದ ಅಥವಾ ಸ್ಯಾನಿಟೈಸರ್ನಿಂದ ಕೈ ತೊಳೆದುಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಉಪಯೋಗಿಸಬೇಕು. ಯಾವುದೇ ತರಹದ ಕೆಮ್ಮು, ನೆಗಡಿ, ಗಂಟಲು ನೋವು, ಜ್ವರ ಕಂಡುಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭೀಣಿಯರಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಅವರು ತಿಳಿಸಿದ್ದಾರೆ.
ರಾಜ್ಯ ಮಾರ್ಗಸೂಚಿಯಂತೆ ತೀವ್ರ ಉಸಿರಾಟದ ತೊಂದರೆ ಇರುವವರಿಗೆ ಹಾಗೂ ಗರ್ಭೀಣಿಯರು, ಮಕ್ಕಳು, ವೃದ್ಧರಲ್ಲಿ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರ ಸಲಹೆ ಮೇರೆಗೆ ಕೋವಿಡ-19 ಪರೀಕ್ಷೆ ಮಾಡಲಾಗುತ್ತದೆ. ಕೋವಿಡ್-19 ಸೋಂಕನ್ನು ದೃಢಪಡಿಸಿಕೊಳ್ಳಲು ಆರ್ಟಿಪಿಸಿಆರ್ ಪರೀಕ್ಷೆಗಾಗಿ ಜಿಮ್ಸ್ ಪ್ರಯೋಗಶಾಲೆ ಕಲ್ಬುರ್ಗಿಗೆ ನಿಗದಿಪಡಿಸಿದ್ದು, ಜಿಲ್ಲೆಯ ಎಲ್ಲ ಮಾದರಿಗಳು ಅಲ್ಲಿಯೇ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.