ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್(Ahmedabad): ಕಳೆದ 18 ವರ್ಷಗಳಿಂದ ಆರ್ ಸಿಬಿ ತಂಡ ಮಾತ್ರಲ್ಲ, ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕಳೆದ ಮಂಗಳವಾರ ರಾತ್ರಿ ನನಸಾಗಿದೆ. ಎಲ್ಲರ ಕಣ್ಣುಗಳು ತುಂಬಿಕೊಂಡಿವೆ. ಎಲ್ಲೆಡೆ ಹರ್ಷೋದ್ಗಾರ ಮೊಳಗಿದೆ. ಒಂದು ಕಪ್ ಗೆಲ್ಲುವ ಸಲುವಾಗಿ ನಡೆಸಿದ ಹೋರಾಟ ಅಷ್ಟಿಇಷ್ಟಿಲ್ಲ. ಪ್ರತಿ ಸಲ ಸೋತಾಗಲೂ ಅದೇ ತಾಳ್ಮೆ ಹಾಗೂ ಪ್ರೀತಿಯಿಂದ, ಈ ಸಲ್ ಕಪ್ ನಮ್ದೆ ಎಂದು ಹೇಳುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುತ್ತಿದ್ದ ಅಸಂಖ್ಯಾತ ಫ್ಯಾನ್ಸ್ ಇಡೀ ಜಗತ್ತು ಗೆದ್ದ ಖುಷಿಯಲ್ಲಿದ್ದಾರೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್ ಸಿಬಿ 6 ರನ್ ಗಳಿಂದ ಗೆಲುವು ಸಾಧಿಸಿದೆ. ಇದರಿಂದಾಗಿ ಕಳೆದ 18 ವರ್ಷಗಳಿಂದ ಸೋಲು ಕಂಡಿದ್ದ ತಂಡ ಹಾಗೂ ಅಭಿಮಾನಿಗಳಿಗೆ ಎಲ್ಲೆಲ್ಲಿದ ಸಂಭ್ರಮವಾಗಿದೆ. ಜಿಯೋ ಹಾಟ್ ಸ್ಟಾರ್ ನಲ್ಲಿ ಬರೋಬ್ಬರಿ 67 ಕೋಟಿಗೂ ಅಧಿಕ ಜನರು ಪಂದ್ಯ ವೀಕ್ಷಣೆ ಮಾಡಿದ್ದಾರೆ ಅಂದರೆ ಅದರ ಕ್ರೇಜ್ ಎಷ್ಟಿದೆ ಅನ್ನೋದು ತಿಳಿಯಲಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಪಡೆ ಉತ್ತಮ ಬೌಲಿಂಗ್ ಮಾಡಿದೆಯಾದರೂ ಬೆಂಗಳೂರು ಹುಡುಗರು ಭರ್ಜರಿಯಾಗಿ ಬ್ಯಾಟ್ ಬೀಸಿದರು. ವಿರಾಟ್ ಕೊಹ್ಲಿ 43, ಮಯಾಂಕ್ ಅಗರ್ವಾಲ್ 24, ರಜತ್ ಪಟೀದಾರ್ 26, ಲಿವಿಂಗಸ್ಟನ್ 25, ಜಿತೇಶ್ ಶರ್ಮಾ 24 ರನ್ ಗಳಿಂದಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ. ಪಂಜಾಬ್ ಪರ ಅರ್ಸದೀಪ್ ಸಿಂಗ್ 3, ಜಮೇಸ್ಸನ್ 3 ವಿಕೆಟ್ ಪಡೆದು ಮಿಂಚಿದರು. ಓಮರ್ಜಿ, ವೈಶಾಕ್ ವಿಜಯ್ ಕುಮಾರ್, ಚಹಲ್ ತಲಾ 1 ವಿಕೆಟ್ ಪಡೆದರು.
ಈ ಸ್ಕೋರ್ ಬೆನ್ನು ಹತ್ತಿದ ಪಂಜಾಬ್ ಕೊನೆಯ ತನಕ ಹೋರಾಟ ನಡೆಸಿತು. ಇಂಗ್ಲಿಷ್ 39, ಶಶಾಂಕ್ ಸಿಂಗ್ ಅಜೇಯ ಭರ್ಜರಿ 6 ಸಿಕ್ಸ್, 3 ಫೋರ್ ಗಳೊಂದಿಗೆ 61 ರನ್ ಬಾರಿಸಿದರು. ಆರ್ಯ 24, ವದೇರಾ 15 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ 6 ರನ್ ಗಳಿಂದ ಸೋಲು ಅನುಭವಿಸಿತು. ಆರ್ ಸಿಬಿ ಪರ ಭುವನೇಶ್ವರ್ ಕುಮಾರ್ 2, ಕೃನಾಲ್ ಪಾಂಡ್ಯೆ 2, ಯಶ್ ದಯಾಳ್, ಹೇಜಲ್ ವುಡ್, ಶಫರ್ಡ್ ತಲಾ 1 ವಿಕೆಟ್ ಪಡೆದರು. ಪ್ಲೇಯರ್ ಆಫ್ ದಿ ಟೂರ್ನಾಮೆಂಟ್ ಮುಂಬೈ ತಂಡದ ಸೂರ್ಯಕುಮಾರ್ ಯಾದವ್, ಪ್ಲೇಯರ್ ಆಫ್ ದಿ ಮ್ಯಾಚ್ ಕೃನಾಲ್ ಪಾಂಡ್ಯೆ ಆದರು.