ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ದೂರದ ಬೆಂಗಳೂರಿನಿಂದ ಗುಮ್ಮಟನಗರಿ ವಿಜಯಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಕುಟುಂಬದ ಮೂವರು ಐತಿಹಾಸಿಕ ಭೂತನಾಳ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದುರಂತ ನಡೆದಿದೆ. ಬುಧವಾರ ಈ ಒಂದು ಘಟನೆ ನಡೆದಿದೆ. ಬೆಂಗಳೂರಿನ ಆರ್.ಟಿ ನಗರದ ಬಾಲಕ ಮಹಮ್ಮದ್ ಹಯಾತ್(12), ಹೈದರ್ ಪಾಷಾ(32) ಹಾಗೂ ಅಬ್ದುಲ್ ಖುದ್ದೂಸ್(35) ಮೃತ ದುರ್ದೈವಿಗಳು.
14 ಜನರು ಕುಟುಂಬ ಸಮೇತ ವಿಜಯಪುರಕ್ಕೆ ಪ್ರವಾಸಕ್ಕೆ ಬಂದಿದ್ದಾರೆ. ಬಾಲಕ ಮಹಮ್ಮದ್ ನೀರಿಗೆ ಇಳಿದಿದ್ದ ವೇಳೆ ಕಾಲು ಜಾರಿ ಮುಳುಗಿದ್ದಾನೆ. ಆತನ ರಕ್ಷಣೆಗೆ ಹೋದ ಹೈದರ್, ಅಬ್ದುಲ್ ಸಹ ಆಳಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಅನ್ನೋದು ಸೇರಿದಂತೆ ಈಜಲು ಹೋದಾಗ ಈ ದುರ್ಘಟನೆ ನಡೆದಿದೆ ಅಂತಾನೂ ಹೇಳಲಾಗುತ್ತಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ಮೃತದೇಹವನ್ನು ಹೊರತೆಗೆದಿದ್ದಾರೆ.
ಖುಷಿ ಖುಷಿಯಾಗಿ ಪ್ರವಾಸಕ್ಕೆ ಬಂದಾಗ ನಡೆದ ಅನಾಹುತದಿಂದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ತಮ್ಮವರನ್ನು ಕಳೆದುಕೊಂಡವರು ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು. ಈ ಬಗ್ಗೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.




