ಪ್ರಜಾಸ್ತ್ರ ಸುದ್ದಿ
ತುಮಕೂರು(Tumakoru): ಜಿಲ್ಲೆಯ ಕೊರಟಗೆರೆ ಹಾಗೂ ಕೊಳಾಲ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಮನುಷ್ಯನ ಮೃತದೇಹದ ಭಾಗಗಳು ಪತ್ತೆಯಾಗಿವೆ. ಇದರಿಂದಾಗಿ ಸಾರ್ವಜನಿಕರು ಆತಂಕದಲ್ಲಿದ್ದಾರೆ. ಪೊಲೀಸರು ಸತತವಾಗಿ ಹುಡುಕಾಟ ನಡೆಸಿದ ಬಳಿಕ ಸಿದ್ಧರ ಬೆಟ್ಟ ರಸ್ತೆಯಲ್ಲಿ ಕೊಳೆತ ಸ್ಥಿತಿಯಲ್ಲಿ ರುಂಡ ಪತ್ತೆಯಾಗಿದೆ. ತಲೆಗೆ ಹಾಕಿಕೊಳ್ಳುವ ಕ್ಲಿಪ್ ಪತ್ತೆಯಾಗಿದ್ದು, ಮಹಿಳೆಯ ಮೃತದೇಹ ಇರಬಹುದು ಎಂದು ಶಂಕಿಸಲಾಗಿದೆ.
ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿಯ ಹೊರ ವಲಯದ ಮುತ್ಯಲಮ್ಮ ದೇವಸ್ಥಾನದಿಂದ ಸುಮಾರು 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ ಮನುಷ್ಯನ ದೇಹದ ಭಾಗಗಳು ರೈತರೊಬ್ಬರ ದೃಷ್ಟಿಗೆ ಬಿದ್ದಿವೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಕಪ್ಪು ಬಣ್ಣದ ಕವರ್ ನಲ್ಲಿ ಕೈ ತುಂಡು ಪತ್ತೆಯಾಗಿದೆ. ಮತ್ತೆ ದಾರಿಯುದ್ದಕ್ಕೂ ಹುಡುಕಾಟ ನಡೆಸಿದಾಗ ದೇಹದ ಬೇರೆ ಬೇರೆ ಭಾಗಗಳು ಪತ್ತೆಯಾಗಿವೆ.
ಪತ್ತೆಯಾದ ಮೃತದೇಹದ ಭಾಗಗಳನ್ನು ಪೊಲೀಸರು ಎಫ್ಎಸ್ಎಲ್ ವರದಿಗೆ ಕಳಿಸಿದ್ದಾರೆ. ಅಪರಿಚಿತ ಮೃತದೇಹದ ಗುರುತು ಪತ್ತೆ ಕಾರ್ಯ ನಡೆದಿದೆ. ಸ್ಥಳೀಯವಾಗಿ ಕಾಣೆಯಾದವರ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೈ ಮೇಲಿನ ಟ್ಯಾಟುನಿಂದ ಮಹಿಳೆಯದ್ದು ಎನ್ನುವ ಶಂಕೆ ಮೂಡಿದೆ. ಪೊಲೀಸ್ ತನಿಖೆಯಿಂದ ಹಂತಕ ಯಾರು, ಕೊಲೆಯಾದವರು ಯಾರು ಅನ್ನೋ ಈ ನಿಗೂಢ ಪ್ರಕರಣದ ಸತ್ಯ ಹೊರ ಬರಬೇಕಿದೆ.