ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ಶನಿವಾರ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ 16ನೇ ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಭಾಗವಹಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಹೆಚ್ಚಿನ ಸಂಖ್ಯೆಯಲ್ಲಿ ನಟ, ನಟಿಯರು ಸೇರಿ ಚಿತ್ರರಂಗದವರೆ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದಕ್ಕೆ ಕಿಡಿ ಕಾರಿದರು. ಚಿತ್ರೋದ್ಯಮದ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದವರು ಭಾಗವಹಿಸದಿರುವುದು ಬೇಸರದ ಸಂಗತಿ. ನಮ್ಮ ಜೊತೆ ಕೈ ಜೋಡಿಸದವರ ನಟ್ಟು, ಬೋಲ್ಟ್ ಎಲ್ಲಿ ಟೈಟ್ ಮಾಡಬೇಕೆಂದು ತಿಳಿದಿದೆ ಎಂದು ಖಾರವಾಗಿ ಮಾತನಾಡಿದ್ದರು. ಇದಕ್ಕೆ ಭಾನುವಾರ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ನಟ್ಟು, ಬೋಲ್ಟ್ ಸರಿಮಾಡಲು ಅಧಿಕಾರ ಕೊಟ್ಟಿದ್ಯಾರು ಎಂದರು.
138 ಸ್ಥಾನಗಳನ್ನು ಕೊಟ್ಟಿರುವುದು ಜನರ ಕೆಲಸ ಮಾಡಲು. ನಟ್ಟು, ಬೋಲ್ಟ್ ಟೈಟ್ ಮಾಡಲು ಅಧಿಕಾರ ಕೊಟ್ಟಿದ್ದಾರಾ? ಅದನ್ನು ಮಾಡಲು ಬೇರೆಯವರಿದ್ದಾರೆ. ಇನ್ನು ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಗಳೇ ನಡೆಯುತ್ತಿಲ್ಲ. ಅದರ ಬಗ್ಗೆ ಯಾರಿಗೂ ಚಿಂತೆಯಿಲ್ಲ. ಬರೀ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಹಲವು ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.