ಪ್ರಜಾಸ್ತ್ರ ಸುದ್ದಿ
ಸಿಂದಗಿ (Sindagi): ಶತಮಾನಗಳಿಂದ ಆಚರಿಸಿಕೊಂಡು ಬರಲಾದ ವರ್ಣ ಪದ್ಧತಿ ಇಂದು ಜಾತಿ ಎಂಬ ಪೆಡಂಭೂತವಾಗಿ ಕಾಡುತ್ತಲಿದೆ ಎಂದು ಉಪನ್ಯಾಸಕ ಸಾಹೇಬಗೌಡ ದುದ್ದಗಿ ಅಭಿಪ್ರಾಯ ಪಟ್ಟರು. ಪಟ್ಟಣದ ಪದ್ಮರಾಜ ವಿದ್ಯಾವರ್ಧಕ ಸಂಘದ ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಎಸ್ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ವಿದ್ಯಾಚೇತನ ಪ್ರಕಾಶನ, ಸಿಂದಗಿ ಇವುಗಳ ಸಹಯೋಗದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ “ಕನ್ನಡ ಸಾಹಿತ್ಯದಲ್ಲಿ ವರ್ಣ ಸಂಘರ್ಷ” ಎಂಬ ವಿಷಯದ ಮೇಲೆ ಮಾತನಾಡಿದರು.
ವೇದಾಕಾಲದಿಂದ ಹಿಡಿದು ಬಿಳಿಯ ಮತ್ತು ಕಪ್ಪು ವರ್ಣಗಳ ನಡುವೆ ಸಂಘರ್ಷವೆಂಬುದು ನಡೆಯುತ್ತಲೇ ಇದ್ದುದಕ್ಕೆ ಇಂದಿಗೂ ಅಳಿಯದೆ ಉಳಿದು ಹೆಮ್ಮರವಾಗಿ ಬೆಳೆದು ನಿಂತ ಜಾತಿ ಎಂಬ ಪದವೇ ಜ್ವಲಂತ ಉದಾಹರಣೆಯಾಗಿದೆ ಎಂದರು. ಕನ್ನಡ ಸಾಹಿತ್ಯವನ್ನು ಅವಲೋಕನ ಮಾಡಿದರೆ ವರ್ಣ ಸಂಘರ್ಷದ ಛಾಯೆ ಎಲ್ಲೆಲ್ಲೂ ಕಾಣ ಸಿಗುತ್ತದೆ. ಇಂತಹ ಅಮಾನವೀಯ ಗುಣಗಳನ್ನು ನಮ್ಮ ಹೃದಯದದಿಂದ ಕಳಚಿ ಹಾಕಿದಾಗಲೇ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಇದೆ ವೇಳೆ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಐ ಭಂಡಾರಿಯವರು ಮಾತನಾಡಿ, ಕಪ್ಪು ಮತ್ತು ಬಿಳುಪು ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಇನ್ನೊಂದರಿಂದ ಹೇಗೆ ಬೇರ್ಪಡಿಸಲು ಅಸಾಧ್ಯವೋ ಅದೇ ತರನಾಗಿ ಎರಡೂ ವರ್ಣಗಳು ಒಂದರೊಡನೊಂದು ಕೂಡಿಕೊಂಡಾಗ ಮಾತ್ರ ಬದುಕು ಸಾರ್ಥಕ ಎಂದು ಹೇಳಿದರು. ವೇದಿಕೆಯ ಮೇಲೆ ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಎಂ.ಪಾಟೀಲ, ಐಕ್ಯೂಎಸಿ ಸಂಚಾಲಕ ಪ್ರೊ.ಬಸವರಾಜ ಮಹಾಜನಶೆಟ್ಟಿ, ವಿದ್ಯಾರ್ಥಿ ಸಂಘದ ಕಾರ್ಯಧ್ಯಕ್ಷೆ ಡಾ.ಶ್ರೀದೇವಿ ಸಿಂದಗಿ, ಉಪನ್ಯಾಸಕ ದಾನಯ್ಯ ಮಠಪತಿ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.