ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ತಮ್ಮ ಬದುಕಿನ ಮಾರ್ಗದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರಿದವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಎಂದು ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಶನಿವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಶರಣೆ ಮಲ್ಲಮ್ಮನವರು ಕಷ್ಟಗಳಿಗೆ ಎದೆಗುಂದದೇ ತಾಳ್ಮೆಯ ಬದುಕಿನ ಮಾರ್ಗದಲ್ಲಿ ನಡೆಯುವುದರೊಂದಿಗೆ ಅವರ ಬದುಕಿನ ತತ್ವಾದರ್ಶಗಳು ಇಂದಿನ ಸಮಾಜಕ್ಕೆ ಪ್ರೇರಣಾದಾಯಕವಾಗಿದೆ ಎಂದು ಅವರು ತಿಳಿಸಿದರು.
ಮೈದುನ ವೇಮನನಿಗೆ ಸನ್ಮಾರ್ಗ ತೋರಿಸಿ ಆದರ್ಶ ವ್ಯಕ್ತಿಯನ್ನಾಗಿಸಿದವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವಿಭಕ್ತ ಕುಟುಂಬದ ಪರಿಕಲ್ಪನೆಯಲ್ಲಿ ಸಾಗಿ ಸಮಾಜಕ್ಕೆ ಕುಟುಂಬದ ಮೌಲ್ಯಗಳನ್ನು ಸಾರಿದರು. ಅವರ ತತ್ವಾದರ್ಶಗಳನ್ನು ಇಂದಿನ ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಿಕ್ಯಾಬ್ ಮಹಿಳಾ ಮಹಾವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ ಮೇತ್ರಿ ಮಾತನಾಡಿ, ತಾಳ್ಮೆ, ಸಹನೆ ಹಾಗೂ ಭಕ್ತಿಯ ಮಾರ್ಗದಲ್ಲಿ ಸಾಗಿದವರು. ಸಹನೆ, ಭಕ್ತಿ, ದಾನಿ, ಕ್ಷಮಾಗುಣಿ ಹೀಗೆ ಅನೇಕ ನಾಮಗಳಿಂದ ಹೇಮರೆಡ್ಡಿ ಮಲ್ಲಮ್ಮ ಅವರನ್ನು ಸ್ಮರಿಸಲಾಗುವುದು. ದಾನದ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಶಿವಶರಣೆ ಮಲ್ಲಮ್ಮ, ಕಷ್ಟಗಳಲ್ಲಿಯೂ ಸಕಾರಾತ್ಮಕತೆ ಕಂಡುಕೊಂಡವರು. ಮಲ್ಲಮ್ಮ ತಮ್ಮಲ್ಲಿರುವ ತಾಳ್ಮೆ ಶಕ್ತಿಯಂತಹ ಆದರ್ಶಮಯ ಅಂಶಗಳ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಾರತಿ ಕುಂದನಗಾರ (ಸೋನಾರ) ಹಾಗೂ ಅವರ ತಂಡದವರಿಂದ ಸುಗಮ ಸಂಗೀತ ನಡೆಸಿಕೊಟ್ಟರು. ಶ್ರೀ ಮುತ್ತಪ್ಪ ಬಿ. ಸಂಕಣ್ಣವರ ಮತ್ತು ತಂಡದಿಂದ ಸ್ತ್ರೀ ಕುಲಕ್ಕೆ ಮಾದರಿ ಹೇಮರೆಡ್ಡಿ ಮಲ್ಲಮ್ಮ ಅವರ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು. ಎಚ್.ಎ.ಮಮದಾಪುರ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷರಾದ ಸುರೇಶ ದೇಸಾಯಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜ ಮುಖಂಡರುಗಳಾದ ಎಚ್.ಆರ್. ಮಾಚಪ್ಪನವರ, ಎಚ್.ವೈ.ಕರಿಗೌಡರ, ಕೆ.ಬಿ.ಪಾಟೀಲ, ಬಿ.ಎಸ್.ಬಿರಾದಾರ, ಎಸ್.ಎಂ.ಡಿಗಾವಿ, ಅಶೋಕ ಮಲಘಾಣ, ಎಸ್.ಎಲ್.ಜೀರ್ಗಾಳ, ಆರ್.ಪಿ.ಕೋಡಬಾಗಿ, ಗೌರಮ್ಮ ರೆಡ್ಡಿ, ಗೀತಾ ದೇಸಾಯಿ, ವಿದ್ಯಾವತಿ ಅಂಕಲಗಿ, ದೇವೆಂದ್ರ ಮಿರೆಕರ್, ಗಿರೀಶ ಕುಲಕರ್ಣಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.