ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ತಾವರೆಕೊಪ್ಪ ಸಿಂಹ ಧಾಮದಲ್ಲಿ ಗುರುವಾರ ತಡರಾತ್ರಿ ಚಿಕಿತ್ಸೆ ನೀಡಲು ಹೋಗಿದ್ದ ವನ್ಯಜೀವ ವೈದ್ಯೆ ಸಮೀಕ್ಷಾ ರೆಡ್ಡಿ ಅವರ ಮೇಲೆ ನೀರಾನೆ ದಾಳಿ ಮಾಡಿದೆ. ತೀವ್ರ ಗಾಯಗೊಂಡಿದ್ದ ಅವರು, ಚಿಕಿತ್ಸೆ ಫಲಿಸದೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ.
ಡಾ.ಸಮೀಕ್ಷಾ ರೆಡ್ಡಿ(26) ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಒಂದೂವರೆ ತಿಂಗಳ ಹಿಂದೆಯಷ್ಟೇ ತಾವರೆಕೊಪ್ಪ ಸಿಂಹ ಧಾಮದಲ್ಲಿ ತರಬೇತಿಗೆ ನೇಮಕವಾಗಿದ್ದರು. ದುರಾದೃಷ್ಟವಶಾತ್ ನೀರಾನೆ ದಾಳಿಯಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ನೀರಾನೆ ಇನ್ಜುಗೆ ನಾಲ್ಕು ದಿನಗಳ ಹಿಂದೆ ಹೆರಿಗೆ ಆಗಿದೆ. ಆಹಾರ ಸೇವಿಸದ ಕಾರಣ ಕಳೆದ ರಾತ್ರಿ ಡಾ.ಸಮೀಕ್ಷಾ ರೆಡ್ಡಿ ಪರಿಶೀಲನೆ ಮಾಡಲು ಅದರ ಬಳಿ ಹೋಗಿದ್ದರು. ಈ ವೇಳೆ ದಾಳಿ ಮಾಡಿದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಿಬ್ಬಂದಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಸಂಬಂಧ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.




