ಪ್ರಜಾಸ್ತ್ರ ಸುದ್ದಿ
ಯಾದಗಿರಿ: ಜಮೀನು ದಾರಿ ವಿಚಾರವಾಗಿ ಎರಡು ಕುಟುಂಬಗಳ ಜಗಳ ನಡೆದಿದೆ. ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡಿ ಬಗೆಹರಿಸಿದ್ದರು. ಆದರೆ, ಕೆಲವರು ಜಾತಿ ನಿಂದನೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುತ್ತೇವೆ ಎಂದು ಹೆದರಿ ಹಾಕಿದ್ದಾರಂತೆ. ಇದರಿಂದ ಭಯಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ನಡೆದಿದೆ. ಮೆಹಬೂಬ್(22) ಮೃತಪಟ್ಟ ಯುವಕನೆಂದು ತಿಳಿದು ಬಂದಿದೆ.
ಮಗನ ಸಾವಿನ ಬಗ್ಗೆ ತಿಳಿದು ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರಂತೆ. ಒಂದೇ ದಿನದಲ್ಲಿ ಮಗ ಹಾಗೂ ತಂದೆ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೊಂದಾಣಿಕೆಯಿಂದ ಹೋಗಬೇಕಾದ ವಿಚಾರಕ್ಕೆ ಜಗಳ ಮಾಡಿಕೊಂಡು, ಅದು ಬೇರೆ ಸ್ವರೂಪ ಪಡೆದಿದೆ. ಈಗ ಎರಡು ಜೀವಗಳು ಬಲಿಯಾಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿಕೊಂಡಿದೆ.