ಪ್ರಜಾಸ್ತ್ರ ಸುದ್ದಿ
ಯಡ್ರಾಮಿ(Yadrami): ಇಲ್ಲಿನ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 2021ರಿಂದ 2025ರ ತನಕ ನಡೆದ ವಿವಿಧ ಕಾಮಗಾರಿಯಲ್ಲಿ ಕಳಪೆ ನಡೆಸಲಾಗಿದೆ ಎಂದು ಆರೋಪಿಸಿ, ಬಿಸಿಲು ನಾಡಿನ ಹಸಿರು ಸೇನೆ ವತಿಯಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಟ್ಟಣ ಪಂಚಾಯ್ತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಲಬುರಗಿಯ ಯೋಜನಾ ನಿರ್ದೇಶಕರಿಗೆ ಏಪ್ರಿಲ್ 1, 2025 ಹಾಗೂ ಮೇ 17, 2025ರಂದು ದೂರು ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಪ್ರತಿಭಟನೆ ನಡೆಸಲಾಗುತ್ತಿದೆ.
ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕಳಪೆ ಕಾಮಗಾರಿ ನಡೆಸುವ ಮೂಲಕ ಹಣ ಲೂಟಿ ಮಾಡಲಾಗಿದೆ. ಅಧಿಕಾರಿಗಳ ಬೆಂಬಲದಿಂದ ಹಣ ಲೂಟಿಕೋರರ ಪಾಲಾಗಿದೆ. ಈ ಬಗ್ಗೆ ದೂರು ನೀಡಿದರೂ ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಆಗಸ್ಟ್ 6, 2025ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪತ್ರ ಬರೆಯಲಾಗಿದೆ.
ಈ ಒಂದು ಹೋರಾಟದಲ್ಲಿ ಬಿಸಿಲು ನಾಡಿನ ಹಸಿರು ಸೇನೆ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರು ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು, ರೈತ ಮುಖಂಡರು, ಸಾಮಾಜಿಕ ಹೋರಾಟಗಾರರ ಭಾಗವಹಿಸಿದ್ದಾರೆ.