ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಸಿಂದಗಿ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಯುವನೇತಾ ಬೈಠಕ್ ಅಭಿಯಾನ ಮಾಡಲಾಗುವುದು. ಈ ಮೂಲಕ ಬಡ, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ಸಮುದಾಯದ ಯುವಕರು ನಾಯಕರಾಗಬೇಕು ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಹೇಳಿದರು. ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ಈಗಿನ ರಾಜಕೀಯ ಪಕ್ಷಗಳು ಯುವಕರನ್ನು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಹಣ ಬಲದಿಂದ, ವಂಶಪರಂಪರೆಯಾಗಿ ಆಡಳಿತ ನಡೆಸಬೇಕು ಎನ್ನುತ್ತಾರೆ. ಭಷ್ಟಾಚಾರ, ಅನ್ಯಾಯ, ಅಕ್ರಮದ ಮೂಲಕ ದೇಶವನ್ನು ಹಾಳು ಮಾಡುತ್ತಿದ್ದು, ಲಂಚವಿಲ್ಲದ ಯಾವುದೇ ಇಲಾಖೆಯಲ್ಲಿ ಕೆಲಸವಾಗುತ್ತಿಲ್ಲ. ಇದರ ವಿರುದ್ಧ ನಾವು ಹೋರಾಡಬೇಕಿದೆ. ನಮ್ಮ ಮುಂದಿನ ಪೀಳಿಗೆಗೆಯಾದರೂ ಇದರಿಂದ ಅನುಕೂಲವಾಗಲಿ ಎಂದು ಹೇಳಿದರು.
ರಾಜ್ಯ ಯುವ ಸಮಿತಿಯ ಸಂಘಟನಾ ಕಾರ್ಯದರ್ಶಿ ನಬಿರಸುಲ್ ಹುಣಶ್ಯಾಳ ಮಾತನಾಡಿ, ಸಿಂದಗಿ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಯುವನೇತಾ ಬೈಠಕ್ ಅಭಿಯಾನ ನಡೆಸುತ್ತೇವೆ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಿದ್ದು, ಅದರ ವಿರುದ್ಧ ಹೋರಾಟ ಮಾಡುತ್ತೇವೆ. ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಹೋರಾಟ ನಡೆಸುತ್ತೇವೆ. ಮುಂದಿನ ತಿಂಗಳ ಅಂತ್ಯಕ್ಕೆ ಸಿಂದಗಿ ತಾಲೂಕಿನಲ್ಲಿ ಕೆಆರ್ ಎಸ್ ಪಕ್ಷದ ಸಮಿತಿಯನ್ನು ರಚನೆ ಮಾಡಲಾಗುತ್ತೆ ಎಂದು ಹೇಳಿದರು. ಈ ವೇಳೆ ಜಿಲ್ಲಾಧ್ಯಕ್ಷ ಅಶೋಕ ಜಾಧವ, ಪ್ರವೀಣ ಕನಸೆ, ನಾಗನಿಂಗ ನಾಟಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




