ಪ್ರಜಾಸ್ತ್ರ ಸುದ್ದಿ
ಚಿಕ್ಕಬಳ್ಳಾಪುರ(Chikkaballapura): ಕಲ್ಲುಗಣಿಗಾರಿಕೆ ಹಾಗೂ ಗಣಿಗಾರಿಕೆ ಲಾರಿಗಳ ಸಂಚಾರಕ್ಕೆ ರಸ್ತೆ ಮಾಡುವ ಸಂಬಂಧ ಎರಡು ಗುಂಪುಗಳ ನಡುವೆ ಬುಧವಾರ ಗಲಾಟೆ ನಡೆದ ಪ್ರಕರಣ ಮಂಚೇನಹಳ್ಳಿ ತಾಲೂಕಿನ ಬಂಡಿರಾಮನಹಳ್ಳಿ ಹತ್ತಿರ ನಡೆದಿದೆ. ಈ ವೇಳೆ ಗಣಿ ಮಾಲೀಕ ರೈತನ ಮೇಲೆ ಗುಂಡು ಹಾರಿಸಿದ್ದಾನೆ. ರೈತ ರವಿ ಎಂಬುವರ ಮೇಲೆ ಗಣಿ ಮಾಲೀಕ ಸಕಲೇಶ್ ಎಂಬುವರು ಗುಂಡು ಹಾರಿಸಿದ್ದಾರೆ.
ಬಂಡಿರಾಮನಹಳ್ಳಿ, ಕನಗಾನಕೊಪ್ಪ, ರಾಯನಕಲ್ಲು ಗ್ರಾಮಗಳ ಹತ್ತಿರದ ಬೆಟ್ಟಗುಡ್ಡಗಳಲ್ಲಿ ಕಲ್ಲುಗಣಿಗಾರಿಕೆ ವಿಚಾರ ಸಂಬಂಧ ಫೆಬ್ರವರಿಯಲ್ಲಿ ತಾಲೂಕು ಪರಿಸರ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಬೆಟ್ಟದಿಂದ ಸ್ವಚ್ಛಗಾಳಿ, ಮೇವು, ನೀರು ಸಿಗುತ್ತಿದೆ. ಇಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲವೆಂದು ಪ್ರತಿಭಟನೆ ನಡೆಸಿದ್ದರು. ಆಗ ಪೊಲೀಸ್ ಠಾಣೆಯಲ್ಲಿ ಸಭೆಗಳು ನಡೆದಿದ್ದವು.
ಇದರ ನಡುವೆ ಇಂದು ಸಕಲೇಶ್ ಜೆಸಿಬಿ ಮೂಲಕ ರಸ್ತೆ ನಿರ್ಮಿಸಲು ಬಂದಿದ್ದಾರೆ. ಈ ವೇಳೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಹೀಗಿರುವಾಗ ಸಕಲೇಶ್ ರಿವಾಲ್ವರ್ ಹಿಡಿದು ಬೆದರಿಕೆ ಹಾಕಿದ್ದು ಅಲ್ಲದೆ ಗುಂಡು ಹಾರಿಸಿದ್ದಾನೆ. ಆಗ ರೈತ ರವಿಗೆ ಬಿದ್ದು ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.