ಪ್ರಜಾಸ್ತ್ರ ಸುದ್ದಿ
ಅಮರಾವತಿ: ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆ ಸಹ ನಡೆದಿದೆ. 175 ಸ್ಥಾನಗಳನ್ನು ಆಂಧ್ರ ವಿಧಾನಸಭಾ ಹೊಂದಿದೆ. ಚಂದ್ರಬಾಬು ನಾಯ್ಡು ನಾಯಕತ್ವದ ಟಿಡಿಪಿ ಒನ್ ವೇ ರಿಸಲ್ಟ್ ಪಡೆದಿದೆ. ಆಡಳಿತರೂಡ ವೈಎಸ್ಆರ್ ಸಿಪಿ ಹೀನಾಯ ಸೋಲು ಕಂಡಿದೆ.
133 ಸ್ಥಾನಗಳಲ್ಲಿ ಟಿಡಿಪಿ ಇದೆ. ನಟ ಪವನ್ ಕಲ್ಯಾಣ್ ನಾಯಕತ್ವದ ಜನಸೇನಾ ಪಾರ್ಟಿ 20, ಸಿಎಂ ಜಗನ್ ಮೋಹನ್ ರೆಡ್ಡಿ ನಾಯಕತ್ವದ ವೈಎಸ್ಆರ್ ಕಾಂಗ್ರೆಸ್ ಪಾರ್ಟಿ ಕೇವಲ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಹೀನಾಯ ಸೋಲು ಅನುಭವಿಸಿದ್ದಾರೆ. ಬಿಜೆಪಿ 7ರಲ್ಲಿದೆ.
2019ರಲ್ಲಿ ಈ ಫಲಿತಾಂಶ ಉಲ್ಟಾ ಇತ್ತು. ಅಂದು ಟಿಡಿಪಿ 20ರಲ್ಲಿದ್ದರೆ ವೈಎಸ್ಆರ್ ಸಿಪಿ 150ರ ಮೇಲಿತ್ತು. ಸಿಎಂ ಆದ ಜಗನ್ ಮೋಹನ್ ರೆಡ್ಡಿ ನಡೆದುಕೊಂಡ ರೀತಿ, ತೆಗೆದುಕೊಂಡ ನಿರ್ಧಾರಗಳು ಅವರಿಗೆ ತಿರುಮಂತ್ರವಾಗಿವೆ. ನಾನು ವಿಧಾನಸಭೆಗೆ ಬರುವುದಾದರೆ ಸಿಎಂ ಆಗಿಯೇ ಎಂದು ಹೇಳಿದ್ದ ಚಂದ್ರಬಾಬು ನಾಯ್ಡು ಹೇಳಿದಂತೆ ಮಾಡಿದ್ದಾರೆ. ತಮಿಳುನಾಡಿನಲ್ಲಿಯೂ ಸದನದಲ್ಲಿ ಜಯಲಲಿತಾ ಸೀರೆ ಎಳೆದ ಘಟನೆ ನಡೆದಾಗ ಅವರು ಸಹ ನಾನು ಸಿಎಂ ಆಗಿಯೇ ವಿಧಾನಸಭೆ ಪ್ರವೇಶಿಸುವೆ ಎಂದಿದ್ದರು. ಹಾಗೇ ಮಾಡಿದರು.
ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿರುವ ಟಿಡಿಪಿ ಲೋಕಸಭೆಯಲ್ಲಿ ಬೆಂಬಲ ನೀಡುತ್ತಾ, ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಾ ಎನ್ನುವ ಕುತೂಹಲವಿದೆ. ಯಾಕಂದರೆ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಮಿತ್ರಪಕ್ಷಗಳ ಬೆಂಬಲದ ಅವಶ್ಯಕವಿದೆ. ಜೂನ್ 9ರಂದು ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದು, ಮುಂದಿನ ರಾಜಕೀಯ ಚಟುವಟಿಕೆಗಳು ಕುತೂಹಲ ಮೂಡಿಸಲಿವೆ.