ಆಲಮೇಲ: ವಿಜಯಪುರ ಜಿಲ್ಲೆ ಆಲಮೇಲ ಪಟ್ಟಣದಲ್ಲಿರುವ ಬ್ಯಾಂಕ್ ಗಳ ಬಾಗಿಲು ಮುಂದೆ, ನಿಮ್ಮ ಪಾದರಕ್ಷೆಗಳನ್ನ ಹೊರಗೆ ಬಿಡಿ ಅನ್ನೋ ಬೋರ್ಡ್ ಹಾಕಲಾಗಿದೆ. ಪಟ್ಟಣದ ಬ್ಯಾಂಕ್ ಆಫ್ ಬರೋಡದ ಪ್ರವೇಶಗೇಟಿನ ಮುಂದೆ ಹಾಗೂ ಬಾಗಿಲಿನ ಗ್ಲಾಸ್ ಗೆ ಈ ರೀತಿ ಬೋರ್ಡ್ ಹಾಕಲಾಗಿದೆ.
ಈ ಬಗ್ಗೆ ಇಲ್ಲಿನ ಸಿಬ್ಬಂದಿಯನ್ನ ಕೇಳಿದ್ರೆ, ಮಳೆಯಾಗ್ತಿರುವುದ್ರಿಂದ ಈ ರೀತಿ ಬರೆಯಲಾಗಿದೆ ಅನ್ನೋ ವಿಚಿತ್ರ ಹೇಳಿಕೆ ನೀಡ್ತಾರೆ. ಅಲ್ದೇ, ಕೆನಾರಾ ಬ್ಯಾಂಕ್ ಮುಂದೆ ಸಹ ಈ ರೀತಿ ಬೋರ್ಡ್ ಹಾಕಿದ್ದಾರೆಂದು ಇಲ್ಲಿನ ಸಿಬ್ಬಂದಿಯೊಬ್ಬರು ಹೇಳ್ತಾರೆ. ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಚಪ್ಪಲಿ ಹಾಕಿಕೊಂಡು ಹೋಗ್ತಾರಂತೆ, ಗ್ರಾಹಕರು ಹೊರಗೆ ಬಿಡಬೇಕಂತೆ.
ಇದು ನಿಜಕ್ಕೂ ವಿಚಿತ್ರವಾಗಿದೆ. ಬ್ಯಾಂಕ್ ಮುಂದೆ ಚಪ್ಪಲಿ ಬಿಟ್ಟು ಬರಲು ಇದೇನು ದೇವಸ್ಥಾನವೇ. ಮಳೆ ಬರುತ್ತೆ ಅಂತಾ ಗ್ರಾಹಕರಿಗೆ ಪಾದರಕ್ಷೆಗಳನ್ನ ಹೊರಗೆ ಬಿಡಿ ಎಂದು ಯಾವ ರೀತಿ ಹೇಳಿದ್ರು ಅನ್ನೋದು ತಿಳಿಯುತ್ತಿಲ್ಲ. ಈ ಐಡಿಯಾ ಕೊಟ್ಟ ಆ ಪುಣ್ಯಾತ್ಮ ಯಾರೋ ಗೊತ್ತಿಲ್ಲ. ನೆಲ ಒರೆಸಬೇಕಾಗುತ್ತೆ ಅನ್ನೋ ಕಾರಣಕ್ಕೆ ಕುಂಟು ನೆಪ ಹೇಳಿ ಗ್ರಾಹಕರಿಗೆ ಅವಮಾನ ಮಾಡ್ತಿದ್ದಾರೆ ಎನ್ನಲಾಗ್ತಿದೆ.
ಬ್ಯಾಂಕ್ ಹಚ್ಚಿಕೊಂಡೇ ಎಟಿಎಂ ಇದೆ. ಅಲ್ಲಿ ನೋಡಿದ್ರೆ ಕಸದ ರಾಶಿ ಬಿದ್ದಿದೆ. ಅದನ್ನ ಸ್ವಚ್ಛ ಮಾಡುವವರು ಸಹ ಗತಿಯಿಲ್ಲ. ಮಾಡಬೇಕಾದ ಕೆಲಸ ಬಿಟ್ಟು ಇಂಥಾ ಕೆಲಸಕ್ಕೆ ಬಾರದ ಬೋರ್ಡ್ ಹಾಕಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ. ಇಲ್ದೇ ಹೋದ್ರೆ ಬ್ಯಾಂಕಿನ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಅಂತಾ ಸ್ಥಳೀಯರು ತಿಳಿಸಿದ್ದಾರೆ.