ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧ ಅವರ ತಾಯಿ ಭವಾನಿ ರೇವಣ್ಣ ವಿರುದ್ಧವೂ ಕೆಲವು ಆರೋಪಗಳು ಕೇಳಿ ಬಂದಿದ್ದು, ಕಳೆದೊಂದು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಭವಾನಿ ರೇವಣ್ಣ ಇಂದು ಎಸ್ಐಟಿ ಮುಂದೆ ಪ್ರತ್ಯಕ್ಷರಾದರು.
ಮೂರು ಬಾರಿ ಎಸ್ಐಟಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಅವರ ಮನೆಗೆ ಹೋಗಿ ಕಾಯ್ದರು ಅವರ ಸುಳಿವು ಇರಲಿಲ್ಲ. ಹೈಕೋರ್ಟ್ ಭವಾನಿ ರೇವಣ್ಣನವರನ್ನು ಬಂಧಿಸಬಾರದು ಎನ್ನುವ ಸೂಚನೆ ನೀಡುತ್ತಿದ್ದಂತೆ ವಕೀಲರೊಂದಿಗೆ ಪ್ರತ್ಯಕ್ಷರಾಗಿ ಎಸ್ಐಟಿ ವಿಚಾರಣೆ ಎದುರಿಸಿದ್ದಾರೆ.
ನನ್ನ ಮಗನ ವಿರುದ್ಧ ಕೆಲವರು ಷಡ್ಯಂತ್ರ ಮಾಡಿದ್ದಾರೆ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನಾನು ಯಾರನ್ನೂ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆಂತೆ.