ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭರ್ಜರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೃಷ್ಣ ನದಿ ತೀರದ ಜನರು ಪ್ರವಾಹದ ಪರಿಸ್ಥಿತಿಯನ್ನ ಎದುರಿಸ್ತಿದ್ದಾರೆ. ಹೀಗಾಗಿ ಇವರನ್ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವ ಕೆಲಸ ಭರದಿಂದ ಸಾಗಿದೆ.
ಕೃಷ್ಣ ನದಿ ಮೂಲಕ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರ್ತಿದೆ. ಇದ್ರಿಂದಾಗಿ ಉತ್ತರ ಕರ್ನಾಟಕ ಭಾಗದ ಜನರಲ್ಲಿ ಆತಂಕ ನಿರ್ಮಾಣವಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಸದ್ಯ ಕೃಷ್ಣ ನದಿಗೆ 2.5 ಲಕ್ಷ ಕ್ಯೂಸೆಕ್ ನೀರು ಹರಿದು ಬರ್ತಿದೆ. ಹೀಗಾಗಿ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸಾಗಿಸಲು 45ಕ್ಕೂ ಹೆಚ್ಚು ಎನ್ ಡಿಆರ್ ಎಫ್ ಸಿಬ್ಬಂದಿ 100ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ರಕ್ಷಣಾಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕೃಷ್ಣ, ಘಟಪ್ರಭಾ ನದಿಗಳ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ 20ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಯಿದೆ. ಜಮಖಂಡಿ ತಾಲೂಕಿನ ತಮದಡ್ಡಿ, ಮುತ್ತೂರು, ಮೂಗೂರುಗಳಲ್ಲಿ ನೀರನ ಪ್ರಮಾಣ ಹೆಚ್ಚಾಗಿದೆ. ಮುತ್ತೂರು ಗ್ರಾಮದ 10 ಕುಟುಂಬಗಳನ್ನ ಸ್ಥಳಾಂತರಿಸಲಾಗಿದೆ. ಮುಧೋಳ ತಾಲೂಕಿನ ಹಲವು ಸೇತುವೆಗಳು ಜಲಾವೃತವಾಗಿವೆ.
ಪ್ರವಾಹಕ್ಕೆ ಸಿಲುಕಿದ ಚಿಕ್ಕೋಡಿ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಬರೋಬ್ಬರಿ 41 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಹೀಗಾಗಿ ಈಗಾಗ್ಲೇ 10 ಜನ ವಸತಿ ಪ್ರದೇಶಗಳನ್ನ ತೆರೆಯಲಾಗಿದೆ. ಜನರ ರಕ್ಷಣೆಗಾಗಿ 25 ಬೋಟ್ ಗಳನ್ನ ಬಳಸಾಗ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಭೆ ನಡೆಸಿದ್ದಾರೆ. ಕೃಷ್ಣ, ಬೊಮ್ಮನಹಳ್ಳಿ ನದಿಗೆ 3 ಲಕ್ಷ ಕ್ಯೂಸೆಕ್ ನೀರು ಹರಿದು ಬರಲಿದೆ ಅಂತಾ ತಿಳಿಸಿದ್ದಾರೆ. ಇಂದು ಮಧ್ಯಾಹ್ನ 60 ಎನ್ ಡಿಆರ್ ಎಫ್ ಸಿಬ್ಬಂದಿ ಆಗಮಿಸಲಿದ್ದಾರೆ ಅಂತಾ ತಿಳಿಸಲಾಗಿದೆ.
ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ 24X7 ಹೆಲ್ಪ್ ಲೈನ್ ತೆರೆಯಲಾಗಿದೆ. ಭಾರತೀಯ ಸೇನೆ, ರಾಜ್ಯ, ಕೇಂದ್ರ ವಿಪತ್ತು ನರ್ವಹಣಾ ತಂಡದಿಂದ ಕಾರ್ಯಾಚರಣೆ ನಡೆಸಲಾಗ್ತಿದೆ. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.