ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಭರ್ಜರಿಯಾಗಿ ಮಳೆ ಸುರಿಯುತ್ತಿದೆ. ಮಳೆಯಿಂದ ಮಕ್ಕಳ ಸುರಕ್ಷತೆ ಮತ್ತು ಜನರ ಹಿತದೃಷ್ಟಿಯಿಂದ ಆಗಸ್ಟ್ 6 ಮತ್ತು 7 ರಂದು ಎರಡು ದಿನಗಳ ಕಾಲ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲಾಧಿಕಾರಿ ದೀಪಾ ಎಂ ಚೋಳನ್ ಅವರು ಆದೇಶ ಹೊರಡಿಸಿದ್ದಾರೆ. ಎರಡು ರಜಾ ದಿನಗಳನ್ನು ಮುಂಬರುವ ರವಿವಾರ ದಿನಗಳಂದು ಕರ್ತವ್ಯ ನಿರ್ವಹಿಸಿ, ಅವಧಿಗಳನ್ನ ಸರಿದೂಗಿಸಿಕೊಳ್ಳಲು ಅವರು ಸೂಚಿಸಿದ್ದಾರೆ. ಜಿಲ್ಲೆಯ ಎರಡು ದಿನಗಳ ರಜೆ ಅಂಗನವಾಡಿಗಳಿಗೂ ಅನ್ವಯಿಸುತ್ತದೆ ಅಂತಾ ತಿಳಿಸಲಾಗಿದೆ.
ಬೆಳಗಾವಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭಾರಿ ಪ್ರಮಾಣದ ಭೂಕುಸಿತವಾಗಿದೆ. ಇದ್ರಿಂದಾಗಿ ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದ್ರಿಂದಾಗಿ ನಾಳೆ ಮಧ್ಯಾಹ್ನದವರೆಗೂ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ಪುಣೆಗೆ ಸಂಪರ್ಕಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೂಕುಸಿತವಾಗಿದ್ದು, ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಾಡಿದ್ದಾರೆ. ನಿನ್ನೆ ಸಂಜೆಯಿಂದಲೇ ರಾಜ್ಯದ ಗಡಿಯಲ್ಲಿ ಬೆಳಗಾವಿ ಪೊಲೀಸ್ರು ವಾಹನ ಸ್ಥಗಿತಗೊಳಿಸಿದ್ದಾರೆ.
ಕಲಬುರಗಿ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿರುವ ವೀರಾ ನದಿಯಿಂದ ಪ್ರತಿದಿನ 1 ಟಿಎಂಸಿ ನೀರನ್ನ ಭೀಮಾ ನದಿಗೆ ಬಿಡಲಾಗ್ತಿದೆ. ಹೀಗಾಗಿ ನೀರಿನ ಒಳಹರಿವು ಹೆಚ್ಚಾಗಿದೆ. ಈ ಕಾರಣದ ಭೀಮಾ ನದಿ ಪಾತ್ರದ ಗ್ರಾಮಗಳ ಜನತೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ಎಚ್ಚರಿಕೆ ಮನವಿ ಮಾಡಿಕೊಳ್ಳಲಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಕಲಬುರಗಿ ತಾಲೂಕಿನ ಭೀಮಾ ನದಿ ಪಾತ್ರದ ಗ್ರಾಮಗಳ ಜನತೆ ನದಿ ಕಡೆ ಹೋಗುವುದು ಮತ್ತು ಜಾನುವಾರುಗಳನ್ನ ನದಿ ತೀರದಲ್ಲಿ ಬಿಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.