ಪ್ರಜಾಸ್ತ್ರ ಸುದ್ದಿ
ಚಿಟಗುಪ್ಪಾ(Chitaguppa): ವಿಶ್ವಗುರು ಬಸವಣ್ಣನವರ ಸಮಾನತೆ, ಕಾಯಕವೇ ಕೈಲಾಸ ಮತ್ತು ಅನುಭವ ಮಂಟಪದ ತತ್ವಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಮಾದರಿಯಾಗಬೇಕು ಎಂದು ಇಂದುಮತಿ ಗಾರಂಪಳ್ಳಿ ಹೇಳಿದರು. ಪಟ್ಟಣ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಇಂದುಮತಿ ಗಾರಂಪಳ್ಳಿ ಇವರ ಮನೆಯಲ್ಲಿ ಬಸವಣ್ಣನವರ 893ನೇ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಾತಿ, ಮತ, ಭೇದವಿಲ್ಲದೆ ಸಮಾಜದ ಎಲ್ಲ ವರ್ಗದವರನ್ನು ಒಂದಾಗಿ ಕಂಡು, ಆಚರಣೆಯಲ್ಲಿ ತರುವುದೇ ಬಸವ ತತ್ವ ಮುಖ್ಯ ಉದ್ದೇಶ. ಮೂಢನಂಬಿಕೆಗಳನ್ನು ತೊರೆದು, ವೈಜ್ಞಾನಿಕ ಮತ್ತು ಮಾನವೀಯ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಬಸವಣ್ಣನವರ ಮತ್ತು ಶಿವಶರಣರ ವಚನಗಳನ್ನು ಪಠಿಸುವುದು, ಅವುಗಳ ಅರ್ಥೈಸಿಕೊಂಡು ಜೀವನವನ್ನು ತಾತ್ವಿಕತೆಯೊಂದಿಗೆ ಸಾಗಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಂದ್ರಶೇಖರ ತಂಗಾ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಆಶಯದೊಂದಿಗೆ ಬಸವ ಜಯಂತಿ ಆಚರಣೆ ಮಾಡುವುದು ಸಮಂಜಸವಾಗಿದೆ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ.ಎನ್.ಜವಾದಿ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೇಮಾ ಬಿಡಪ್ಪ, ಈಶ್ವರಮ್ಮಾ ಗಾರಂಪಳ್ಳಿ, ಶರಣಮ್ಮ ಗಾರಂಪಳ್ಳಿ, ಗುರುನಾಥ ಮಾಹಾಜನ್, ಶೌರ್ಯ ಜವಾದಿ, ಶ್ರಾವ್ಯ ಜವಾದಿ, ಸೂರ್ಯಕಾಂತ ಗುಡ್ಡಾ, ವೀರ ಮಾಹಾಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




