ಪ್ರಜಾಸ್ತ್ರ ಸುದ್ದಿ, ಮಹೇಶ ಶರ್ಮಾ
ಅಥಣಿ(Athani): ತಾಲೂಕಿನ ಪ್ರವಾಸ ಮಂದಿರದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಾರ್ವಜನಿಕ ಅಹವಾಲು ಆಲಿಸಿದರು. ಈ ವೇಳೆ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಅಥಣಿ ಘಟಕ ಹಾಗೂ ಸಾರ್ವಜನಿಕರ ವತಿಯಿಂದ ಅತ್ಯಂತ ತುರ್ತು ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.
ಸ್ಥಳದಲ್ಲೇ ಇಒಗೆ ಒಂದು ವಾರದ ಗಡುವು: ಮಂಗಸೂಳಿ ಗ್ರಾಮದ ವಾರ್ಡ್ ನಂ.6ರ ಎಸ್ಸಿ ಕಾಲೋನಿಯಲ್ಲಿ ಚರಂಡಿ ನೀರು ಸರಿಯಾಗಿ ಹರಿಯದೆ ಮನೆಗಳ ಗೋಡೆಗಳು ಶೀಥಲಗೊಳ್ಳುತ್ತಿರುವ ಗಂಭೀರ ಸಮಸ್ಯೆಗೆ ಸ್ಪಂದಿಸಿದ ಸಚಿವರು, ಸ್ಥಳದಲ್ಲೇ ಇದ್ದ ಕಾಗವಾಡ ತಾಲೂಕು ಪಂಚಾಯತ್ ಇಒ ವೀರಣ್ಣ ವಾಲಿ ಅವರಿಗೆ ಒಂದು ವಾರದ ಒಳಗಾಗಿ ಸಮಸ್ಯೆ ಬಗೆಹರಿಸಲು ಕಟ್ಟುನಿಟ್ಟಿನ ಆದೇಶ ನೀಡಿದರು.
ಮದಭಾವಿ, ಹುಲಗಬಾಳ, ಅಡಹಳ್ಳಿ, ಬೆವನೂರ ಹಾಗೂ ಮಲಾಬಾದ್ ಗ್ರಾಮಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಯುದ್ಧೋಪಾದಿಯಲ್ಲಿ ಸುಧಾರಣೆ ಮಾಡಲು ಆಗ್ರಹಿಸಲಾಯಿತು. ಅಥಣಿ-ಕಾಗವಾಡದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಹೆಚ್ಚಿನ ಸೌಲಭ್ಯ ನೀಡಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗಾಗಿ ಹೈಟೆಕ್ ಶೌಚಾಲಯ ನಿರ್ಮಿಸಬೇಕೆಂದು ಸಂಸ್ಥೆಯ ತಾಲೂಕು ಮುಖ್ಯಸ್ಥ ಪ್ರವೀಣ್ ನಾಯಿಕ ಒತ್ತಾಯಿಸಿದರು.
ಈ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶರಣಪ್ಪ ಶಿಂದೆ, ಅನಿಲ ಭಾಮನೆ, ಎಂ.ಎಂ.ಶರ್ಮಾ, ಶಿವಾನಂದ ನಾವಿ, ಕವಿತಾ ಬೋಸಲೆ, ಸಂಗೀತ ಮುರಗೋಡ, ರೋಹಿಣಿ ಭಂಡಾರೆ, ರೋಹಿದಾಸ್ ಭಂಡಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.



