ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ ಶುಭಂ ಬಡಾವಣೆಯಲ್ಲಿ ನಾಲ್ಕು ವಿದ್ಯುತ್ ಕಂಬಗಳು ಸಂಪೂರ್ಣವಾಗಿ ಬಾಗಿವೆ. ಸರ್ವೆ ನಂಬರ್ 773/ಡ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿವೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ಹೆಸ್ಕಾಂ ಸ್ಥಳೀಯ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಯ ಗಮನಕ್ಕೆ ಹಲವು ಬಾರಿ ತೆಗೆದುಕೊಂಡು ಬರಲಾಗಿದೆ. ಆದರೆ, ಇದನ್ನು ಸರಿಪಡಿಸುವ ಕೆಲಸ ಮಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೆಸ್ಕಾಂನ ಹುಬ್ಬಳ್ಳಿ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಇಲ್ಲಿನ ನಿವಾಸಿಗಳು ಪತ್ರ ಬರೆದಿದ್ದಾರೆ.
ವಿದ್ಯುತ್ ಕಂಬಗಳು ವಾಲಿದ್ದರಿಂದ ಯಾವುದೇ ಸಂದರ್ಭದಲ್ಲಿ ಅನಾಹುತ ಸಂಭವಿಸಬಹುದು. ಮಳೆಗಾಲ ಶುರುವಾಗಲಿದ್ದು, ಸಾರ್ವಜನಿಕರಿಗೆ ಇದರಿಂದ ತೀವ್ರ ತೊಂದರೆಯಾಗಲಿದೆ. ಜೀವ ಭವದಲ್ಲಿ ಇಲ್ಲಿನ ನಿವಾಸಿಗಳು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸಬೇಕು. ಇಲ್ಲದೆ ಹೋದರೆ ಮುಂದೆ ಆಗುವ ಅನಾಹುತಗಳಿಗೆ ಸಂಬಂಧ ಇಲಾಖೆಯವರು ಹೊಣೆಗಾರರು ಆಗಿರುತ್ತಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಶುಭಂ ಬಡಾವಣೆಯ ನಿವಾಸಿಗಳಾದ ಶಿವಾನಂದ ತಾವರಖೇಡ, ಶಿವ ಸಿಂಪಗೇರ, ಕುರ್ನಳ್ಳಿ, ಬಾಸುತ್ಕರ್, ಗುರುಪಾದ ಮಲ್ಲಾಡ ಹೇಳಿದ್ದಾರೆ.



