ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೇಶದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮ, ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದು, ಅವರನ್ನು ಬಲವಂತವಾಗಿ ಶನಿವಾರ ಪೊಲೀಸರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅವರಿಗೆ ಅಗತ್ಯ ವೈದ್ಯಕೀಯ ನೆರವು ನೀಡಲಾಗುತ್ತಿದ್ದು, ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಸಫ್ದರ್ ಜಂಗ್ ಆಸ್ಪತ್ರೆಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಪವಾಸ ಸತ್ಯಾಗ್ರಹದಿಂದ ಅವರ ಆರೋಗ್ಯದಲ್ಲಿ ತೀವ್ರ ತೊಂದರೆ ಕಾಣಿಸಿಕೊಂಡಿದೆ. ವೈದ್ಯರು ಔಷಧಿ ಪಡೆಯಿರಿ ಎಂದರು ಸಹ ತೆಗೆದುಕೊಂಡಿಲ್ಲ. ವಾಂಗ್ಚೂಕ್ ಕುಟುಂಬಸ್ಥರು ಸಹ ಚಿಕಿತ್ಸೆಗೆ ಒಪ್ಪಿಗೆ ನೀಡಿರಲಿಲ್ಲ. ಆದರೆ, ದೆಹಲಿ ಪೊಲೀಸರು ಶನಿವಾರ ಬಲವಂತದಿಂದ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹಲವು ರೀತಿಯ ಯೋಜನೆಗಳನ್ನು ರೂಪಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಇಷ್ಟಾದರೂ ಪ್ರಧಾನಿ ಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಭಾರತ ಸರ್ಕಾರದ ಯಾವೊಬ್ಬ ಸಚಿವರು ಮೌನ ಮುರಿಯುತ್ತಿಲ್ಲ. ಸಾರ್ವಜನಿಕರೊಬ್ಬರು ದೆಹಲಿ ಹೈಕೋರ್ಟ್ ಗೆ ಹೋಗಿ ವಾಂಗ್ಚೂಕ್ ಅವರ ಆರೋಗ್ಯದ ಕುರಿತು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಕೋರ್ಟ್ ಅವರ ಆರೋಗ್ಯದ ಮೇಲೆ ನಿಗಾ ವಹಿಸಬೇಕು ಎಂದು ಆದೇಶ ನೀಡಿದ ಬಳಿಕ ವೈದ್ಯರ ತಂಡ ತಪಾಸಣೆ ನಡೆಸಲು ಕೆಲಸ ಮಾಡಿತು. ಶನಿವಾರ ಮುಂಜಾನೆ ಏಕಾಏಕಿ ಅವರನ್ನು ಎತ್ತಿಕೊಂಡು ಹೋಗಲಾಗಿದೆ.



