ಪ್ರಜಾಸ್ತ್ರ ಸುದ್ದಿ, ಮಹೇಶ್ ಶರ್ಮಾ
ಅಥಣಿ(Athani): ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಿವಯೋಗಿ ನಗರದಲ್ಲಿ ತಹಶೀಲ್ದಾರ್ ಕಚೇರಿ ಹಿಂದುಗಡೆ ವಿದ್ಯುತ್ ಪೂರೈಕೆಯ ಮೇನ್ ವೈರ್ ತುಂಡಾಗಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ತಂತಿ ಬಿದ್ದ ಜಾಗದಲ್ಲಿ ಒಣಗಿದ ಕಬ್ಬಿನ ರೌದಿ (ಸರಗು) ಇದ್ದಿದ್ದರಿಂದ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸದೆ ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಅಧಿಕಾರಿಗಳಿಗೆ ಕಣ್ಣಿದ್ದೂ ಕುರುಡೇ?: ಈ ಹಿಂದೆ ಹಲವು ಬಾರಿ ಈ ಅಪಾಯಕಾರಿ ತಂತಿಗಳ ಕುರಿತು ಗಮನಕ್ಕೆ ತಂದರೂ, ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದರೂ ಸಂಬಂಧಪಟ್ಟ ಹೆಸ್ಕಾಂ ಅಧಿಕಾರಿಗಳು ಮಾತ್ರ ಕುಂಭಕರ್ಣ ನಿದ್ದೆಯಿಂದ ಎಚ್ಚರಗೊಳ್ಳುತ್ತಿಲ್ಲ. ಅಧಿಕಾರಿಗಳಿಗೆ ಕಣ್ಣಿನ ಸಮಸ್ಯೆ ಇದೆಯೋ ಅಥವಾ ಕಣ್ಣಿದ್ದೂ ಕುರುಡರಂತೆ ನಟಿಸುತ್ತಿದ್ದಾರೋ? ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಿವಯೋಗಿ ನಗರದಲ್ಲಿ ಅಪಾಯಕಾರಿಯಾಗಿ ತುಂಡಾಗಿ ಬಿದ್ದಿರುವ ಮೇನ್ ವೈರ್ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಿ, ವಿದ್ಯುತ್ ಸಂಪರ್ಕವನ್ನು ವ್ಯವಸ್ಥಿತವಾಗಿ ಯಥಾಸ್ಥಿತಿಗೆ ತರಲು ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆಯೇ ಅಥವಾ ಇನ್ನು ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತಾರೆಯೇ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.



