ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ ಬಸವ ಮಂಟಪದಲ್ಲಿ ಸಿಂದಗಿ ತಾಲೂಕಿನ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನವನ್ನು ಮಂಗಳವಾರ ಆಚರಿಸಲಾಯಿತು. ಬಿಜೆಪಿ ಮುಖಂಡರಾದ ಶ್ರೀಶೈಲಗೌಡ ಬಿರಾದಾರ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಜೋಸೆಫ್ ನೈಸ್ಪೋರ್ ನೀಪ್ಸ್ ಅವರ ಫೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕಾಲದ ಓಟಕ್ಕೆ ಬ್ರೇಕ್ ಹಾಕಿ, ಕಳೆದುಹೋಗುವ ಕ್ಷಣಗಳನ್ನು ಶಾಶ್ವತ ನೆನಪುಗಳಾಗಿ ಉಳಿಸುವ ಅದ್ಭುತ ಶಕ್ತಿ ಛಾಯಾಗ್ರಾಹಕ ಮತ್ತು ವಿಡಿಯೋಗ್ರಾಫರ್ಗಳದ್ದು. ನಮ್ಮ ಜೀವನದ ಸುಖ-ದುಃಖ, ಹಬ್ಬ ಹರಿದಿನಗಳು, ಸಂಭ್ರಮದ ಕ್ಷಣಗಳು ಹಾಗೂ ಐತಿಹಾಸಿಕ ಘಟನೆಗಳಿಗೆ ದೃಶ್ಯರೂಪ ನೀಡಿ, ಅವುಗಳನ್ನು ಮುಂದಿನ ತಲೆಮಾರಿಗೆ ಕನ್ನಡಿಯಂತೆ ತೋರಿಸುವ ಮಹತ್ತರ ಕಾರ್ಯವನ್ನು ಈ ಕಲಾಬಂಧುಗಳು ಮಾಡುತ್ತಿದ್ದಾರೆ ಅಂತಾ ಹೇಳಿದರು.
ಸಮಾಜದ ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿನ ಹಿಂದೆ ಇವರ ಪರಿಶ್ರಮ, ಸೃಜನಶೀಲತೆ ಹಾಗೂ ವೃತ್ತಿಪರ ಬದ್ಧತೆ ಮಹತ್ವದ ಪಾತ್ರ ವಹಿಸುತ್ತದೆ. ಈ ಸಂದರ್ಭದಲ್ಲಿ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಕ್ಷೇತ್ರದವರು ಇಂದು ಎದುರಿಸುತ್ತಿರುವ ಸವಾಲುಗಳು, ವೃತ್ತಿಪರ ಅಭಿವೃದ್ಧಿ ಹಾಗೂ ಭವಿಷ್ಯದ ಅವಕಾಶಗಳ ಕುರಿತು ಈ ವೇಳೆ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ವೇಳೆ ಆದಿಶೇಷ ಮಠದ ನಾಗರತ್ನ ರಾಜಯೋಗಿ ವೀರಾಜಮಹಾಸ್ವಾಮಿಗಳು, ಹಿರಿಯ ಪತ್ರಕರ್ತರಾದ ಶಾಂತೂ ಹಿರೇಮಠ, ವಿಜಯಪುರ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ರಮೇಶ ಚೌವ್ಹಾಣ, ಬಣಜಿಗರ ಸಂಘದ ಅಧ್ಯಕ್ಷರಾದ ಶಾಂತವೀರ ಮನಗೂಳಿ, ಪರಶುರಾಮ ಗೂಳ್ಳೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



