ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮೊಬೈಲ್ ಬಳಕೆ ಹೆಚ್ಚಾದಂತೆ ಮನುಷ್ಯರ ನಡುವಿನ ಆತ್ಮೀಯತೆ ಮತ್ತು ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿವೆ. ತಂತ್ರಜ್ಞಾನದ ಅತಿಯಾದ ಅವಲಂಬನೆಯಿಂದ ಕುಟುಂಬ ವ್ಯವಸ್ಥೆಯೂ ದುರ್ಬಲವಾಗುತ್ತಿದೆ ಎಂದು ಛಾಯಾಗ್ರಾಹಕ ರವಿ ಕುಂಟೋಜಿ ಕಳವಳ ವ್ಯಕ್ತಪಡಿಸಿದರು. ಬುಧವಾರ ಸಿಂದಗಿ ಪಟ್ಟಣದ ಸಂಗಮೇಶ್ವರ ದೇವಸ್ಥಾನದಲ್ಲಿ ಸಿಂದಗಿ ತಾಲ್ಲೂಕಿನ ಛಾಯಾಗ್ರಾಹಕರ ವತಿಯಿಂದ ಆಯೋಜಿಸಿದ್ದ 187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಛಾಯಾಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಛಾಯಾಗ್ರಹಣ ಕೇವಲ ವೃತ್ತಿಯಲ್ಲ, ಹಲವರ ಬದುಕಿಗೆ ಆಸರೆಯಾಗಿರುವ ಸುಂದರ ಕಲೆಯಾಗಿದೆ. ಛಾಯಾಗ್ರಾಹಕರು ಈ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೃತ್ತಿಯಲ್ಲಿ ಮತ್ತಷ್ಟು ಸಾಧನೆ ಮಾಡಬೇಕು ಎಂದು ಹೇಳಿದರು.
ಹಿಂದಿನ ಕಾಲದ ಕಪ್ಪು ಬಿಳುಪು ಛಾಯಾಚಿತ್ರಗಳಿಗೆ ವಿಶೇಷ ಮೌಲ್ಯವಿತ್ತು. ಆದರೆ ಆಧುನಿಕ ತಂತ್ರಜ್ಞಾನ ಹಾಗೂ ಮೊಬೈಲ್ಗಳ ಬಳಕೆ ಹೆಚ್ಚಾದ ಬಳಿಕ ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾಗಿವೆ. ಇದರ ಪರಿಣಾಮ ಜನರ ಜೀವನಶೈಲಿಯಲ್ಲೂ ಬದಲಾವಣೆಯಾಗಿದೆ. ಆಧುನೀಕರಣದ ಪರಿಣಾಮ ಛಾಯಾಗ್ರಹಣ ಕ್ಷೇತ್ರ ಹಾಗೂ ಛಾಯಾಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟದಲ್ಲಿರುವ ಛಾಯಾಗ್ರಾಹಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಹಾಗೂ ಸಮಾಜ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಛಾಯಾಗ್ರಾಹಕರಾದ ಪರಶುರಾಮ ಗೋಳೂರ, ಸಂಗಮ ಪುಟ್ಟು, ವಿನುಸ ಜುಮುನಾಳ, ಬಸವರಾಜ ಬಡಿಗೇರ, ಪ್ರಕಾಶ, ಗಂಗಾಧರ, ಅಂಬರೀಶ ಅಲ್ದಿ, ಬಸಯ್ಯ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.



