ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಅನುವಾದವೆನ್ನುವುದು ಕೇವಲ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮೆಗೊಳಿಸುವುದಲ್ಲ. ಅದೊಂದು ಅನುಸೃಷ್ಷಿಯ ಸೃಜನ ಕ್ರಿಯೆ. ವಿಜಯಪುರದ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಡಾ.ಚನ್ನಪ್ಪ ಕಟ್ಟಿ ಅವರ ಎರಡು ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಹಿರಿಯ ವಿದ್ವಾಂಸರಾದ ಡಾ.ಆರ್.ಕೆ.ಕುಲಕರ್ಣಿ ಅವರು ಅಭಿಪ್ರಾಯಪಟ್ಟರು.
ಚನ್ನಪ್ಪ ಕಟ್ಟಿ ಅವರು ಅನುವಾದಿಸಿದ "ಐರಿಶ್ ಜನಪದ ಕತೆಗಳು" ಮತ್ತು ಅವರು ಬರೆದ "ಪ್ರತಿನುಡಿ" ಲೋಕಾರ್ಪಣೆಗೊಂಡವು. ವಿಶ್ವದಾದ್ಯಂತ ಪ್ರಚಲಿತವಿರುವ ಜನಪದ ಕತೆಗಳು ಸಮಾನವಾದ ಆಶಯಗಳನ್ನು ಹೊಂದಿರುತ್ತವೆ. ಅಂಥ ಮಹತ್ವದ ಸಂಗತಿಯನ್ನು ಸಮರ್ಥಿಸುವಂತೆ ಇಲ್ಲಿನ ಜನಪದ ಕತೆಗಳಿವೆ. "ಪ್ರತಿನುಡಿ" ವಿಮರ್ಶಾ ಗ್ರಂಥದ ಪರಿಚಯ ಮಾಡಿದ ವಿಶ್ರಾಂತ ಪ್ರಾಚಾರ್ಯರಾದ ಡಾ.ಜಿ.ಆರ್.ಕುಲಕರ್ಣಿ ಅವರು ಪ್ರಸ್ತುತ ಕೃತಿಯು ಕಟ್ಟಿ ಅವರ ವ್ಯಾಪಕ ಅಧ್ಯಯನ ಹಾಗೂ ಸಮಚಿತ್ತದ ವಿಮರ್ಶೆಗೆ ಉತ್ತಮ ಮಾದರಿಯಾಗಿದೆ ಎಂದು ಹೇಳಿದರು.
ನೆಲೆ ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ಸದಸ್ಯರಾದ ಡಾ.ಎಂ.ಎಂ.ಪಡಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ ಪ್ರಕಾಶನ ಸಂಸ್ಥೆ ನಡೆದು ಬಂದ ದಾರಿಯನ್ನು ಪರಿಚಯಿಸಿದರು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ ಅಧ್ಯಕ್ಷತೆ ವಹಿಸಿದ್ದರು. ಚಿದಂಬರ ಬಂಡಗರ ಸ್ವಾಗತಿಸಿದರು. ದೇವೂ ಮಾಕೊಂಡ ವಂದಿಸಿದರು. ಡಾ.ಎಸ್.ಕೆ.ಕನ್ನೂರ ಕಾರ್ಯಕ್ರಮ ನಿರೂಪಿಸಿದರು.


