ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಸಚಿವ ಡಾ.ಎಂ.ಬಿ. ಪಾಟೀಲರ ಜೊತೆ ಈ ಹಿಂದೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ, ಮುಂದೆಯೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಮೇಯವೂ ಇಲ್ಲ ಎಂದು ಅರಕೇರಿಯ ಶ್ರೀ ಅಮೋಘಸಿದ್ದೇಶ್ವರನ ಸನ್ನಿಧಿಯಲ್ಲಿ ನಿಂತು ಪವಿತ್ರ ಭಂಡಾರವನ್ನು ಮುಟ್ಟಿ ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಪ್ರಮಾಣ ಮಾಡಿದರು. ಬೆಳಿಗ್ಗೆಯೇ ಅರಕೇರಿಯ ಶ್ರಿ ಅಮೋಘಸಿದ್ದೇಶ್ವರ ದೇವಾಲಯಕ್ಕೆ ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿ ಅಲ್ಲಿಯೇ ಸ್ನಾನ ಮಾಡಿ ಒದ್ದೆ ಬಟ್ಟೆಯ ಮೇಲೆ ಶ್ರೀ ಅಮೋಘಸಿದ್ದೇಶ್ವರನ ದರ್ಶನಾಶೀರ್ವಾದ ಪಡೆದು, ನಮಸ್ಕರಿಸಿದರು. ನಂತರ ದೇವಾಲಯದ ಸನ್ನಿಧಿಯಲ್ಲಿ ನಿಂತು ಪವಿತ್ರ ಭಂಡಾರವನ್ನು ಮುಟ್ಟಿ ನಾನು ಸಚಿವ ಎಂ.ಬಿ. ಪಾಟೀಲರ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಪ್ರಮಾಣ ಮಾಡಿದರು.
ನಂತರ ಮಾತನಾಡಿದ ವಿಜುಗೌಡ ಪಾಟೀಲ, ನಾನು ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸತ್ಯುಳ್ಳ ದೇವರಾದ ಶ್ರೀ ಅಮೋಘಸಿದ್ದೇಶ್ವರನ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಬದ್ಧತೆ ತೋರಿಸಿದ್ದೇನೆ. ಆದರೆ ನನ್ನ ವಿರುದ್ಧ ಆರೋಪ ಮಾಡಿದ ನಗರ ಶಾಸಕರು ನುಡಿದಂತೆ ನಡೆಯಲಿಲ್ಲ, ನಾನು ಹೊಂದಾಣಿಕೆ ಮಾಡಿಕೊಂಡಿದ್ದರೆ 80 ಸಾವಿರಕ್ಕೂ ಅಧಿಕ ಮತಗಳು ಬರುತ್ತಿರಲಿಲ್ಲ, ಅವರು ಮಾಡಿದ ಆರೋಪದಿಂದ ನನ್ನ ಮನಸ್ಸಿಗೆ ನೋವಾಗಿದೆ. ನಾನು ನನ್ನ ಬದ್ಧತೆಯನ್ನು ತೋರಿರುವೆ, ಅವರು ಎಂ.ಬಿ. ಪಾಟೀಲರ ಜೊತೆ ಹೊಂದಾಣಿಕೆ ಮಾಡಿಲ್ಲ ಎಂದು ಪ್ರಮಾಣ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದರು.
ಬಬಲೇಶ್ವರ ಕ್ಷೇತ್ರದ ಜನತೆ ನನ್ನ ಜೊತೆ ಇದ್ದಾರೆ, ಅನೇಕ ಕೂಲಿಕಾರ್ಮಿಕರು ತಮ್ಮ ಕೂಲಿ ಹಣವನ್ನು ತಂದು ಪ್ರೀತಿಯಿಂದ ನನಗೆ ನೀಡಿ ಚುನಾವಣೆ ಖರ್ಚಿಗೆ ನೀಡಿದ್ದಾರೆ. ಇಂತಹ ಕಾರ್ಯಕರ್ತರ ಪಡೆ ಸಂಪಾದಿಸಿರುವೆ, ಆದರೆ ನನ್ನಂತಹ ವ್ಯಕ್ತಿಗೆ ಹೊಂದಾಣಿಕೆ ಎಂದು ದೂರುವುದು ಎಷ್ಟು ಸರಿ ಎಂದು ಏಕವಚನದಲ್ಲಿಯೇ ವಿಜುಗೌಡ ವಾಗ್ದಾಳಿ ನಡೆಸಿದರು. ಈ ವೇಳೆ ಪೀರಗೊಂಡ ಗದ್ಯಾಳ, ಸುರೇಶಗೌಡ ಬಿರಾದಾರ, ಮಹಾವೀರ ಕುಸನಾಳ, ಮಹಾನಿಂಗ ಮಂಟೂರ, ರಾವತ ಕುಂಬಾರ, ಸಂತೋಷ ಕುರದಡ್ಡಿ, ಬಸವರಾಜ ಬಿರಾದಾರ, ಸಾಹೇಬಗೌಡ ಬಿರಾದಾರ, ಶಾಂತಗೌಡ ಪಾಟೀಲ, ರಾಜುಗೌಡ ಪಾಟೀಲ, ಶ್ಯಾಮ ಪವಾರ, ವಿನಾಯಕ ಮಮದಾಪೂರ, ಶಂಕರ ಬಬಲೇಶ್ವರ, ಬಾಲರಾಜ ರೆಡ್ಡಿ, ಪರಮಾನಂದ ಪಾಟೀಲ, ಮಹೇಶ ಮುಕರ್ತಿಹಾಳ, ಭೀಮು ಗೊಳಸಂಗಿ, ರುದ್ರಪ್ಪ ಗಾಣಿಗೇರ, ಪ್ರವೀಣ ತಮಗೊಂಡ, ಮೌಲಾಸಾಬ ಅತ್ತಾರ, ಸಚೀನ್ ಗದ್ಯಾಳ, ಮೋಹನ ನಾಯಕ, ದೋಂಡಿಬಾ ರಾಠೋಡ, ಅಭಿಷೇಕ ನಾಯಕ ಉಪಸ್ಥಿತರಿದ್ದರು.


