ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಸಿನಿ ಬದುಕಿಗೆ 20 ವರ್ಷ ತುಂಬಿದೆ. ಉದಯ ಟಿವಿಯಲ್ಲಿ ಕಾಮಿಡಿ ಟೈಮ್ ಅನ್ನೋ ಹಾಸ್ಯ ಕಾರ್ಯಕ್ರಮದ ಮೂಲಕ ಎಲ್ಲರ ಗಮನ ಸೆಳೆದಿದ್ದ ಯುವಕ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟರು. ಆರ್ಕೆಸ್ಟ್ರಾಗಳಲ್ಲಿ ಡ್ಯಾನ್ಸ್, ಮಿಮಿಕ್ರಿ ಮಾಡುತ್ತಿದ್ದರು. ಗುಟ್ಟು ಅನ್ನೋ ಚಿತ್ರದಲ್ಲಿ ನಟಿಸಿದರು. ಆದರೆ, ಕಾರಣಾಂತರಗಳಿಂದ ಅದು ಬಿಡುಗಡೆಯಾಗಲಿಲ್ಲ.
ಅಮೃತಧಾರೆ ಚಿತ್ರದಲ್ಲಿ ನಟನ ಸ್ನೇಹಿತರ ಪಾತ್ರದಲ್ಲಿ ಗಣೇಶ್ ಸಹ ಒಬ್ಬರಾಗಿ ಕಾಣಿಸಿಕೊಂಡರು. ಹೀಗೆ ಹಲವು ಸಿನಿಮಾಗಳಲ್ಲಿ ಸಹ ನಟನಾಗಿ ಸಿಕ್ಕ ಸಿಕ್ಕ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದರು. 2006ರಲ್ಲಿ ಚೆಲ್ಲಾಟ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡರು. ಅದು ಯಶಸ್ವಿ ಆಯಿತು. ಎಂ.ಡಿ ಶ್ರೀಧರ್ ಇದನ್ನು ನಿರ್ಧೇಶನ ಮಾಡಿದ್ದರು. ಮುಂದೆ ಮುಂಗಾರ ಮಳೆ ಸಿನಿಮಾ ಇವರ ಬದುಕು ಬದಲಿಸಿತು. ಸ್ಟಾರ್ ಪಟ್ಟಕ್ಕೇರಿಸಿತು. ಹಲವು ಮೊದಲುಗಳಿಗೆ ಈ ಸಿನಿಮಾ ಕಾರಣವಾಯಿತು.
ಮುಂದೆ ಚೆಲುವಿನ ಚಿತ್ತಾರ, ಗಾಳಿಪಟ ಚಿತ್ರಗಳು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿ ಕನ್ನಡ ಚಿತ್ರರಂಗದ ಸ್ಟಾರ್ ನಟರ ಸಾಲಿನಲ್ಲಿ ಗಟ್ಟಿ ಸ್ಥಾನ ಪಡೆಯುವಂತೆ ಮಾಡಿದವು. ಸಾಲು ಸಾಲು ಸಿನಿಮಾಗಳು ಸಕ್ಸಸ್ ಕಂಡವು. ಕೃಷ್ಣ, ಚಮಕ್, 99, ಅರಮನೆ, ಮಳೆಯಲಿ ಜೊತೆಯಲಿ(ಈ ಚಿತ್ರಕ್ಕೆ ಅತ್ಯುತ್ತಮ ನಟ ಫಿಲ್ಮ್ ಫೇರ್ ಅವಾರ್ಡ್ ಪಡೆದರು.), ಶ್ರಾವಣಿ ಸುಬ್ರಹ್ಮಣ್ಯ, ಮುಗುಳು ನಗೆ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ರಂಜಿಸಿದರು.
ಈಗ ಬೃಂದಾ ವಿಹಾರಿ, ಡಿಜ್ಯಾಂಗೋ ಕೃಷ್ಣಮೂರ್ತಿ, ಯುವರ್ಸ್ ಸಿನ್ಸಿಯರ್ಲಿ ರಾಮ್, ತಮ್ಮ ಸುಖಾಗಮನ ಬಯಸುವ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಸ್ಕ್ರೀನ್ ಮೇಲೆ ನಾಯಕ ನಟನಾಗಿ ಮಿಂಚಬೇಕು ಅನ್ನೋ ಕನಸು ಕಂಡ ಹುಡುಗ ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟು ಇಂದು ಯಶಸ್ವಿ 20 ವರ್ಷಪೂರೈಸಿದ್ದಾರೆ. ಅವರಿಗೆ ಸ್ಯಾಂಡಲ್ ವುಡ್ ಮಂದಿ, ಅಭಿಮಾನಿಗಳು ಶುಭ ಕೋರಿದ್ದಾರೆ.




