ಪ್ರಜಾಸ್ತ್ರ ಸುದ್ದಿ
ಭುವನೇಶ್ವರ(Bhuvaneshwar): ಮೃತ ಸಹೋದರಿಯ ಬ್ಯಾಂಕ್ ಠೇವಣಿಯ ಹಣವನ್ನು ಪಡೆಯಲು ಪರದಾಡಿ ಸೋತು ಕೊನೆಗೂ ಸಹೋದರಿಯ ಅಸ್ಥಿಪಂಜರವನ್ನು ಬ್ಯಾಂಕ್ ಗೆ ತಂದಿದ್ದ ವ್ಯಕ್ತಿಗೆ ಕೊನೆಗೂ ಹಣ ಸಿಕ್ಕಿದೆ. ದೇಶ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ, ಬ್ಯಾಂಕ್ ಸಿಬ್ಬಂದಿಯ ಅಮಾನವೀಯ ನಡೆಯನ್ನು ಎಲ್ಲರೂ ಖಂಡಿಸಿದ್ದರು. ಇದೀಗ ಒಡಿಶಾ ಗ್ರಾಮೀಣ ಬ್ಯಾಂಕ್ ನ ಅಧಿಕಾರಿಗಳು ಜೀತು ಇದ್ದ ಸ್ಥಳಕ್ಕೆ ಹೋಗಿ 19,402 ರೂಪಾಯಿ ಹಣವನ್ನು ನೀಡಿದ್ದಾರೆ.
ಒಡಿಶಾದ ಕಿಯೋಂಜರ್ ಜಿಲ್ಲೆಯ ಪಟಣಾ ತಾಲೂಕಿನ ದೈನಾಳಿ ಅನ್ನೋ ಬುಡಕಟ್ಟು ಗ್ರಾಮದ ಜೀತು ಮುಂಡಾ ಅನ್ನೋ ವ್ಯಕ್ತಿ ತನ್ನ ಮೃತ ಸಹೋದರಿ ಕರ್ಳಾ ಮುಂಡಾ(56) ಜನವರಿ 26ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರ ಸಾಯುವುದಕ್ಕೂ ಮೊದಲು ಹಸು ಮಾರಿ ಬಂದ 19 ಸಾವಿರ ರೂಪಾಯಿ ಹಣವನ್ನು ತಾಲೂಕಿನ ಮಾಳಿಪೋಶಿ ಶಾಕೆಯಲ್ಲಿ ಠೇವಣಿ ಇಟ್ಟಿದ್ದರು. ಈ ಹಣವನ್ನು ಪಡೆಯಲು ಜೀತು ಬ್ಯಾಂಕ್ ಸಾಕಷ್ಟು ಅಲೆದಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ದಾಖಲೆಗಳ ಸಲುವಾಗಿ ಕಾಡಿಸಿದ್ದಾರೆ. ಇತ್ತೀಚೆಗೆ ಆಕೆ ಸತ್ತಿದ್ದಾಳೆ ಅನ್ನೋದಕ್ಕೆ ಏನು ಸಾಕ್ಷಿ ಎಂದಿದ್ದಾರೆ.
ಬ್ಯಾಂಕ್ ಸಿಬ್ಬಂದಿಯ ವರ್ತನೆಯಿಂದ ಕೆರಳಿದ ಜೀತು ಸ್ಮಶಾನಕ್ಕೆ ಹೋಗಿ ಮೃತ ಸಹೋದರಿಯ ಕೊಳೆತ ಅಸ್ಥಿಪಂಜರವನ್ನು ಚೀಲದಲ್ಲಿ ಹಾಕಿಕೊಂಡು 3 ಕಿಲೋ ಮೀಟರ್ ನಡೆದುಕೊಂಡು ಬ್ಯಾಂಕ್ ಗೆ ಹೋಗಿದ್ದಾನೆ. ಇವಳೆ ನೋಡಿ ಸತ್ತ ನಮ್ಮ ಅಕ್ಕ. ಈಗಲಾದರೂ ಹಣ ಕೊಡಿ ಎಂದಿದ್ದಾನೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ ಸಾಕಷ್ಟು ಟೀಕೆಗೆ ಗುರಿಯಾಯಿತು. ಈಗ ಬ್ಯಾಂಕ್ ಅಧಿಕಾರಿಗಳು ಜೀತು ಮುಂಡಾಗೆ ಹಣ ನೀಡಿದ್ದಾರೆ.




