ಪ್ರಜಾಸ್ತ್ರ ಸುದ್ದಿ
ಅಫಜಲಪುರ(Afzalpur): ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ವೇಟರ್ ಹಾಗೂ ಡಾಬಾ ಮಾಲೀಕನ ನಡುವೆ ಜಗಳ ನಡೆದು, ಅದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ. ತಾಲೂಕಿನ ಮಣ್ಣೂರ ಗ್ರಾಮದಲ್ಲಿನ ಬಿಎಸ್ ಬಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ ಅಲ್ದಿ ಕೊಲೆಯಾದ ದುರ್ದೈವಿ. ಡಾಬಾ ಮಾಲೀಕ ಖಾಜಪ್ಪ ಪೂಜಾರಿ ಕೊಲೆ ಆರೋಪಿ ಎಂದು ಹೇಳಲಾಗುತ್ತಿದೆ.
ಬಡದಾಳ ಗ್ರಾಮದ ಚಂದ್ರಕಾಂತ ಕಳೆದ ಮೂರು ವರ್ಷಗಳಿಂದ ಬಿಎಸ್ ಬಿ ಡಾಬಾದಲ್ಲಿ ವೇಟರ್ ಹಾಗೂ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದನಂತೆ. ಆದರೆ, ಇತ್ತೀಚೆಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬರೀ ಕುಡಿಯುವುದಷ್ಟೇ ಕಲಿತಿದ್ದೀಯ ಎಂದು ಆಗಾಗ ಮಾಲೀಕ ಜಗಳ ಮಾಡುತ್ತಿದ್ದನಂತೆ. ಇದೆ ರೀತಿ ಭಾನುವಾರ ರಾತ್ರಿ ಸುಮಾರು 11.30ರ ಸಮಯದಲ್ಲಿ ಮತ್ತೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋಗಿ ಸ್ಥಳದಲ್ಲಿದ್ದ ಬಿಯರ್ ಬಾಟಲ್ ನಿಂದ ಚಂದ್ರಕಾಂತ ತಲೆಗೆ ಮಾಲೀಕ ಖಾಜಪ್ಪ ಹೊಡೆದಿದ್ದಾನಂತೆ. ಆಗ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಆಮೇಲೆ ಅವನೆ ಎದ್ದು ಬರುತ್ತಾನೆ ಎಂದು ಅವನನ್ನು ಅಲ್ಲೆ ಬಿಟ್ಟು ಹೋಗಿದ್ದಾನಂತೆ. ಮರುದಿನ ಮುಂಜಾನೆ ಬಂದು ನೋಡಿದರೆ ಅವನು ಅಲ್ಲಿ ಬಿದ್ದಿದ್ದಾನೆ. ಎಬ್ಬಿಸಿದರೂ ಎಚ್ಚರವಾಗಿಲ್ಲ. ಆಗ ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮೃತಪಟ್ಟಿದ್ದಾನೆ ಎಂದಿದ್ದಾರೆ. ಈ ವಿಚಾರ ತಿಳಿದು ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ಐ ಸೋಮಲಿಂಗ ಒಡೆಯರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಚಂದ್ರಕಾಂತ ಅಲ್ದಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಾಗಿದೆಯಂತೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.




