ಪ್ರಜಾಸ್ತ್ರ ಸುದ್ದಿ
ಚೆನ್ನೈ(Cehnnai): ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಿರುಪುತ್ತೂರ್ ವಿಧಾನಸಭಾ ಕ್ಷೇತ್ರದಿಂದ 1 ಮತದ ಅಂತರದಿಂದ ಗೆದ್ದಿರುವ ಟಿವಿಕೆ ಪಕ್ಷದ ಶಾಸಕ ಆರ್.ಶ್ರೀನಿವಾಸ್ ಸೇತುಪತಿಗೆ ಹೈಕೋರ್ಟ್ ಶಾಕ್ ನೀಡಿದೆ. ಪರಾಭವಗೊಂಡಿರುವ ಪ್ರತಿಸ್ಪರ್ಧಿ ಡಿಎಂಕೆ ಅಭ್ಯರ್ಥಿ ಕೆ.ಆರ್ ಪೆರಿಯಕರುಪ್ಪನ್ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸಿದೆ. ಹೀಗಾಗಿ ಬುಧವಾರ ನಡೆಯುವ ವಿಶ್ವಾಸಮತಯಾಚನೆ ಸಂಧರ್ಭದಲ್ಲಿಯೂ ಮತ ಹಾಕುವಂತಿಲ್ಲ.
ಏಪ್ರಿಲ್ 23ರಂದು ಮತದಾನ ನಡೆದಿದೆ. ಮೇ 4ರಂದು ಫಲಿತಾಂಶ ಪ್ರಕಟಗೊಂಡಿದೆ. ಟಿವಿಕೆ ಆರ್.ಶ್ರೀನಿವಾಸ್ ಸೇತುಪತಿ 83,365 ಮತಗಳನ್ನು ಪಡೆದಿದ್ದಾರೆ. ಡಿಎಂಕೆಯ ಕೆ.ಆರ್ ಪೆರಿಯಕರುಪ್ಪನ್ 83,364 ಮತಗಳನ್ನು ಪಡೆದಿದ್ದಾರೆ. ಇವರು ಮರು ಮತ ಎಣಿಕೆಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿಗಳಾದ ಎಲ್.ವಿಕ್ಟೋರಿಯಾ ಗೌರಿ, ಎನ್.ಸೆಂಥಿಲ್ ಕುಮಾರ್ ಅವರಿದ್ದ ರಜಾಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಟಿವಿಕೆ ಶಾಸಕ ಆರ್.ಶ್ರೀನಿವಾಸ್ ಪ್ರಮಾಣ ವಚನ ಸ್ವೀಕರಿಸುವಂತಿಲ್ಲ. ಬುಧವಾರದ ವಿಶ್ವಾಸಮತಯಾಚನೆಯಲ್ಲಿ ಮತ ಹಾಕುವಂತಿಲ್ಲ.




