ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು(Chikkamagaloru): ಕಳೆದ ಮೂರು ತಿಂಗಳ ಹಿಂದೆ ವಿಕ್ರಂಗೌಡ ಎನ್ನುವ ನಕ್ಸಲ್(Naxalites) ಹತ್ಯೆ ಬಳಿಕ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಕುರಿತು ಮತ್ತೆ ದೊಡ್ಡ ಮಟ್ಟದ ಚರ್ಚೆ ನಡೆಯಿತು. ನಂತರ ನಕ್ಸಲ್ ರ ಶರಣಾಗತಿ ಪ್ರಕ್ರಿಯೆಗಳು ನಡೆದವು. ಕರ್ನಾಟಕದ ಮಲೆನಾಡಿನ ಭಾಗದಲ್ಲಿ ಸುಮಾರು 8 ಜನರ ನಕ್ಸಲ್ ರು ಇದ್ದಾರೆ ಎನ್ನುವ ಮಾಹಿತಿ ಇತ್ತು. ಅದರಲ್ಲಿ 6 ಜನರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದರು. ಇದೀಗ ನಕ್ಸಲ್ ರವಿ ಕೋಟೆಹೊಂಡ ಶರಣಾಗಿದ್ದಾನೆ. ಶೃಂಗೇರಿಯಿಂದ 4 ಕಿಲೋ ಮೀಟರ್ ದೂರದಲ್ಲಿರುವ ನೆಮ್ಮಾರು ಗ್ರಾಮದ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಶರಣಾಗಿದ್ದಾನೆ.
ಇನ್ನು ನಕ್ಸಲ್ ತೊಂಬಟ್ಟು ಲಕ್ಷ್ಮಿ ಚಿಕ್ಕಮಗಳೂರು ಅಥವ ಉಡುಪಿಯಲ್ಲಿ ನಾಳೆ ಶರಣಾಗಲಿದ್ದಾಳೆ ಎಂದು ತಿಳಿದು ಬಂದಿದೆ. ಇವರಿಬ್ಬರ ಶರಣಾಗತಿಯಿಂದ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ(Naxal Free Karnataka) ಎಂದು ಮುಖ್ಯಮಂತ್ರಿಗಳ ಕಚೇರಿಯಿಂದಲೇ ಶನಿವಾರ ಬಿಡುಗಡೆಯಾದ ಹೇಳಿಕೆಯಲ್ಲಿ ತಿಳಿದು ಬಂದಿದೆ. ಇದರೊಂದಿಗೆ ಆಪರೇಷನ್ ನಕ್ಸಲ್ ಶರಣಾಗತಿ ಪೂರ್ತಿಗೊಂಡಿದೆ. ಇದರಿಂದಾಗಿ ತುಂಬಾ ಸಂತೋಷವಾಗಿದೆ ಎಂದು ಸರ್ಕಾರ ತಿಳಿಸಿದೆ. ಇದಕ್ಕೆ ಶ್ರಮಿಸಿದ 22 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕವನ್ನು ಘೋಷಿಸಲಾಗಿದೆ.