ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿಜಯಪುರ ಜಿಲ್ಲೆಯ ಸಿಂದಗಿ ನಗರದಲ್ಲಿರುವ ಕೆಇಬಿ ಕಚೇರಿಯ ಮಹಡಿ ಮೇಲಿಂದ ಬಿದ್ದು ಲೈನ್ ಮನ್ ವೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದ ಹಂದಿಗನೂರ ಗ್ರಾಮದ 35 ವರ್ಷದ ಮುತ್ತು ಹಣಮಂತ ಡಾಂಗಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ಪಾಳೆಯದ ಕೆಲಸದ ನಿಮಿತ್ತ ಇಲ್ಲಿ ಉಳಿದುಕೊಂಡಿದ್ದು, ಮಹಡಿ ಮೇಲೆ ಮಲಗಿದ್ದರು. ಆದರೆ, ಮಹಡಿ ಮೇಲಿಂದ ಹೇಗೆ ಬಿದ್ದರು ಅನ್ನೋದು ತಿಳಿದು ಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮುತ್ತು ಡಾಂಗಿಯ ಹೆತ್ತವರು, ಪತ್ನಿ, ಸಹದ್ಯೋಗಿಗಳು ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೆಇಬಿ ಕಚೇರಿಯ ಮುಂಭಾಗದಲ್ಲಿ ಸಂಬಂಧಿಕರ ಗೋಳಾಟ ನೋಡಗರ ಹೃದಯ ಹಿಂಡುತ್ತಿತ್ತು. ಮಾಜಿ ಶಾಸಕ ಶರಣಪ್ಪ ಸುಣಗಾರ, ಕಾಂಗ್ರೆಸ್ ಮುಖಂಡ ಚೇತನಗೌಡ ಬಿರಾದಾರ ಸೇರಿದಂತೆ ಇತರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




