ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 35ರ ಫೇವರಚಂದ ಕಾಲೊನಿಯ ರಾಜಕುಮಾರ ಲೇಔಟ್ ನಲ್ಲಿ ನಾಯಿ ಕಡಿತಕ್ಕೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವನ್ನು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಭೇಟಿ ಮಾಡಿದರು. ವೈದ್ಯರಿಂದ ಮಗುವಿನ ಆರೋಗ್ಯ ವಿಚಾರಿಸಿದ ಅವರು, ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಿದರು.
ರಾಜಕುಮಾರ ಲೇಔಟ್ ನಿವಾಸಿಯಾಗಿರುವ 3 ವರ್ಷದ ಮಗು ವಿರಾಜ್ ಸಂತೋಷ ಬಿರಾದಾರ ಮಂಗಳವಾರ ನಾಯಿ ಕಡಿತಕ್ಕೊಳಗಾಗಿದ್ದರಿಂದ ಆತನನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಚಾರ ತಿಳಿದ ಜಿಲ್ಲಾಧಿಕಾರಿ, ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಆತಂಕಕ್ಕೊಳಗಾಗಬೇಕಿಲ್ಲ ಎಂದರು. ಬಾಲಕನಿಗೆ ರೇಬೀಸ್ ವಿರೋಧಿ ಲಸಿಕೆಗಳನ್ನು ನೀಡಲಾಗುತ್ತದೆ. ಜಿಲ್ಲಾಸ್ಪತ್ರೆಯಿಂದಲೂ ಸೂಕ್ತ ಲಸಿಕೆಯನ್ನು ಪಡೆಯಲಾಗುತ್ತಿದೆ. ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಸಮರ್ಪಕ ಸ್ಪಂದಿಸಲಾಗಿದೆ ಎಂದರು.
ರಾಜ್ ಕುಮಾರ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದು, ನಾಯಿಗಳನ್ನು ಹಿಡಿದು ಪುನರ್ ವ್ಯವಸ್ಥೆ (ಡಾಗ್ ಶೆಲ್ಟರ್) ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಪಾಲಿಕೆ ಸದಸ್ಯ ರಾಜು ಕುರಿಯವರ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ ಸೇರಿದಂತೆ ಖಾಸಗಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಹಾಗೂ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು.




