ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ ಜೋಸೆಫ್ ಸ್ಥಾಪನೆಯ ತಮಿಳಗ ವೆಟ್ರಿ ಕಳಗಂ ಪಕ್ಷ 107 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಸರ್ಕಾರ ರಚನೆ ಮಾಡಲು ಆಗುತ್ತಿಲ್ಲ. ಯಾಕಂದರೆ ಮ್ಯಾಜಿಕ್ ನಂಬರ್ 118 ಅವರ ಬಳಿ ಇಲ್ಲ. 5 ಸ್ಥಾನ ಹೊಂದಿರುವ ಕಾಂಗ್ರೆಸ್, ತಲಾ ಎರಡು ಸ್ಥಾನ ಹೊಂದಿರುವ ಸಿಪಿಐ, ಸಿಪಿಐ(ಎಂ) ಪಕ್ಷಗಳು ಬೆಂಬಲ ನೀಡಿವೆ. ಆದರೆ, ವಿಸಿಕೆ ಪಕ್ಷ ಮಾತ್ರ ಸಾಕಷ್ಟು ಕಾಡಿಸುತ್ತಿದೆ.
ಡಿಎಂಕೆಯ ಮೈತ್ರಿ ಪಕ್ಷಗಳಾದ ವಿಡುತಲೈ ತಿರುತೈಗಲ್ ಕಚ್ಚಿ(ವಿಸಿಕೆ) ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಬೆಂಬಲ ನೀಡಲು ದೊಡ್ಡ ಹೈಡ್ರಾಮಾ ನಡೆಸುತ್ತಿವೆ. ಐಯುಎಂಎಲ್ ಬೆಂಬಲ ನೀಡಲ್ಲವೆಂದು ಹೇಳಿದೆ. ವಿಸಿಕೆ ಶುಕ್ರವಾರ ರಾತ್ರಿಯವರೆಗೂ ಬೆಂಬಲ ನೀಡುವ ಕುರಿತು ಮಾತನಾಡಿದೆ. ಆದರೆ, ಈಗ ಉಲ್ಟಾ ಹೊಡೆದಿದೆ ಎನ್ನಲಾಗುತ್ತಿದೆ. ಒಂದು ಡಿಸಿಎಂ ಸ್ಥಾನ, ಒಂದು ಸಚಿವ ಸ್ಥಾನ ಹಾಗೂ ವಿಜಯ ಗೆದ್ದಿರುವ ಪೆರಂಬೂರ್ ಕ್ಷೇತ್ರವನ್ನು ಬಿಟ್ಟುಕೊಡಬೇಕು ಅನ್ನೋ ಬೇಡಿಕೆ ಇಟ್ಟಿದೆಯಂತೆ. ವಿಜಯ ಪೆರಂಬೂರ್ ಹಾಗೂ ತಿರುಚ್ಚಿಯಲ್ಲಿ ಸ್ಪರ್ಧಿಸಿ ಎರಡೂ ಕಡೆ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಪೆರಂಬೂರ್ ಕ್ಷೇತ್ರ ಬಿಟ್ಟು ಕೊಡಬೇಕು ಅನ್ನೋ ಬೇಡಿಕೆ ಇಟ್ಟಿದೆಯಂತೆ.
ಸಧ್ಯ ಕ್ಷಣ ಕ್ಷಣಕ್ಕೂ ರಾಜಕೀಯ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮೇ 10ಕ್ಕೆ ತಮಿಳುನಾಡು ವಿಧಾನಸಭೆಯ ಅವಧಿ ಮುಗಿಯುತ್ತೆ. ಅಷ್ಟರಲ್ಲಿ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಡಳಿತ ಬರಲಿದೆ. ಹೀಗಾಗಿ ಶನಿವಾರ ಎಲ್ಲ ಕಗ್ಗಂಟು ಸಡಿಲವಾಗಿ ವಿಜಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತ ನಿಗದಿಯಾಗಬೇಕಿದೆ. ಇಲ್ಲದಿದ್ದರೆ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಲಿದೆ.




