ಪ್ರಜಾಸ್ತ್ರ ಸುದ್ದಿ
ಹಾಸನ(Hasana): ತಮಿಳುನಾಡಿನ ರಾಜಕೀಯದಲ್ಲಿ ಸಿನಿಮಾದ ಪ್ರಭಾವ ಹೆಚ್ಚಿದೆ. ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ. ಐವತ್ತು ವರ್ಷಗಳಿಂದ ಎರಡು ದ್ರಾವಿಡ್ ಪಕ್ಷಗಳ ಆಡಳಿತ ನೋಡಿದ್ದಾರೆ. ಡಿಎಂಕೆ, ಎಐಎಡಿಎಂಕೆ ಕೂಡಿ ಸರ್ಕಾರ ರಚನೆ ಮಾಡುತ್ತವೆ ಅನ್ನೋದು ಊಹಾಪೋಹ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ಮಾಧ್ಯಮಗಳು ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದಿದ್ದವು. ಆದರೆ, ವಿಜಯ ಸಾಧನೆ ಅಚ್ಚರಿ ತಂದಿದೆ. ಇದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ತಮಿಳುನಾಡು ಸರ್ಕಾರದ ವಾರ್ಷಿಕ ಬಜೆಟ್ 3.40 ಲಕ್ಷ ಕೋಟಿ ಇದೆ. ವಿಜಯ ಘೋಷಣೆ ಮಾಡಿರುವ ಉಚಿತ ಘೋಷಣೆಗಳಿಗೆ 6 ಲಕ್ಷ ಕೋಟಿ ರೂಪಾಯಿ ಬೇಕಾಗಬಹುದು. ಇದನ್ನು ಹೇಗೆ ಹೊಂದಿಸುತ್ತಾರೆ ಅನ್ನೋದು ಕಾದು ನೋಡಬೇಕು ಎಂದರು.




