ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ ಅವರು ಹುಬ್ಬಳ್ಳಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಕುರಿತು ಮೈನಾರಿಟಿ ಮುಸ್ಲಿಮ್ಸ್ ಡೆವಲಪ್ಮೆಂಟ್ ಕಮಿಟಿ (ಎಂಎಂಡಿಸಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಹೇಳಿಕೆ ಸಂವಿಧಾನ ವಿರೋಧಿ ಮತ್ತು ಧಾರ್ಮಿಕ ಅವಮಾನಕರವಾಗಿದ್ದು, ಕೂಡಲೇ ಶಾಸಕತ್ವದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿ ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದೆ.
ಯತ್ನಾಳ್ ಅವರು ಏಪ್ರಿಲ್ 6, 2025ರಂದು ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ‘ಬಾಳಸಾಬ್ ಠಾಕ್ರೆ ಮನೆಯಲ್ಲಿ ಮಹಮ್ಮದ್ ಪೈಗಂಬರ್ ಹುಟ್ಟಿದ್ದಾರೆ’ ಎಂಬ ಆಧಾರರಹಿತ ಮತ್ತು ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇಸ್ಲಾಂ ಧರ್ಮದ ಅನುಯಾಯಿಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಇದು ಕೇವಲ ಅವಮಾನಕರವಲ್ಲದೆ, ಎರಡು ಧರ್ಮಗಳ ನಡುವೆ ದ್ವೇಷ ಮತ್ತು ವೈಷಮ್ಯವನ್ನು ಹುಟ್ಟುಹಾಕುವ ದುರುದ್ದೇಶವನ್ನು ಹೊಂದಿದೆ” ಎಂದು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಒಬ್ಬ ಜನಪ್ರತಿನಿಧಿಯಾಗಿ, ಅದರಲ್ಲೂ ವಿಧಾನಸಭೆಯ ಶಾಸಕರಾಗಿ ಅವರು ನೀಡಿದ ಈ ಹೇಳಿಕೆಯು ಅವರು ಸ್ವೀಕರಿಸಿರುವ ಸಂವಿಧಾನಾತ್ಮಕ ಪ್ರಮಾಣವಚನದ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂವಿಧಾನವು ಸರ್ವಧರ್ಮ ಸಮಭಾವವನ್ನು ಪ್ರತಿಪಾದಿಸುತ್ತಿರುವಾಗ, ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳು ಶಾಸಕರ ಕಾನೂನುಬದ್ಧ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತವೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಯತ್ನಾಳ್ ಅವರ ಇಂತಹ ಹೇಳಿಕೆಗಳು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ. ಹಿಂದೂ ಸಮಾಜ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಸಮಾಜದ ನಡುವೆ ಅನಗತ್ಯ ಬಿರುಕುಗಳನ್ನು ಸೃಷ್ಟಿಸುವ ಮತ್ತು ಪರಸ್ಪರ ವಿಶ್ವಾಸವನ್ನು ಹಾಳುಮಾಡುವ ಹೇಳಿಕೆಗಳನ್ನು ಅವರು ನಿರಂತರ ನೀಡುತ್ತಿದ್ದಾರೆ. ಇಂತಹ ನಡವಳಿಕೆಗಳು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದ್ದು, ಸಾರ್ವಜನಿಕ ಜೀವನದಲ್ಲಿ ನಂಬಿಕೆಯನ್ನು ಕುಂದಿಸುತ್ತದೆ. ಹೀಗಾಗಿ ಅವರು ಶಾಸಕತ್ವ ರದ್ದುಗೊಳಿಸಬೇಕು ಎಂದು ಎಂಎಂಡಿಸಿ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಹಾಸೀಂ ಪೀರ ದರ್ಗಾದ ಸೈಯದ್ ಜೈನುಲ್ ಹಾಬಿದೀನ್, ಎಂಎಂಡಿಸಿ ಮುಖಂಡರಾದ ಶಜ್ಜಾದೆಪಿರಾಂ ಮುಶ್ರೀಫ್, ಇರಫಾನ ಶೇಖ, ಹಾಫೀಜ್ ಸಿದ್ದಿಕಿ, ಇಮ್ರಾನ್ ಜಹಾಗೀರದಾರ, ಹಿದಾಯತ್ ಮಾಶಾಳಕರ್, ಚಾಂದ್ ಹುಸೇನ್ ಮುಲ್ಲಾ, ಅಬ್ದುಲ್ ಹಮೀದ್ ಸಾರವಾಡ, ಖ್ವಾಜಾಅಮಿನ ಮಮದಾಪೂರ, ಹನ್ನಾನ ಶೇಖ, ಇಸಾಕ್ ಲಕ್ಕುಂಡಿ, ಸಾದಿಕ್ ಇಮಾರತವಾಲೆ, , ರಫೀಕ್ ಫನಿಬಂದ, ಮುಸಾ ಲಕ್ಕುಂಡಿ, ಸದ್ದಾಂ ಲಕ್ಕುಂಡಿ, ಮುಂತಾದವರು ಉಪಸ್ಥಿತರಿದ್ದರು.